ಬೆಂಗಳೂರು: ‘ಸಾಧುಸಂತರೆಲ್ಲಾ ಒಂದಾಗಿ ಕೆಲಸ ಮಾಡಿ ರಾಮಮಂದಿರ ನಿರ್ಮಾಣ ಮಾಡಿ’ ಎಂಬ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರ ಹೇಳಿಕೆಗೆ ರಾಜ್ಯ ವಕೀಲರ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ.
‘ರಾಮ ಮಂದಿರ ವಿಷಯಕ್ಕೆ ಸಂಬಂಧಿಸಿದ ವ್ಯಾಜ್ಯ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇದೆ. ಈ ಹಂತದಲ್ಲಿ ಈ ವಿಷಯವನ್ನು ಮುಖ್ಯ ನ್ಯಾಯಮೂರ್ತಿಯೊಬ್ಬರು ಧಾರ್ಮಿಕ ಸಮಾರಂಭದ ವೇದಿಕೆಯಲ್ಲಿ ಪ್ರಸ್ತಾಪಿಸಿರುವುದು ಸರಿಯಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಮುಖರ್ಜಿ ಅವರು ಕಳೆದ ವಾರಾಂತ್ಯ ಉಡುಪಿಯ ಪೇಜಾವರ ಮಠದ ರಾಜಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ ಅವರಿಂದ ‘ಶ್ರೀ ರಾಮ ಕೃಷ್ಣ ಶ್ರೀ ವಿಠಲ’ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ್ದರು.
ಈ ವೇಳೆ, ‘ರಾಮ ಮಂದಿರ ನಿರ್ಮಾಣ ಆಗಬೇಕೆಂಬುದು ಕೋಟ್ಯಂತರ ಜನರ ಆಶಯವಾಗಿದೆ. ಸಂತರೆಲ್ಲ ಒಂದಾಗಿ ರಾಮ ಮಂದಿರ ನಿರ್ಮಾಣ ಮಾಡಿ’ ಎಂದು ಕರೆ ನೀಡಿದ್ದರು.