ಕೊಪ್ಪಳ: ಸಿಡಿಲು ಬಡಿದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ ಬುಧವಾರ ಸಾವನ್ನಪ್ಪಿದ್ದಾರೆ. ಹಾಲವರ್ತಿ ಗ್ರಾಮದ ಅಭ್ಯರ್ಥಿ ಮಲ್ಲಮ್ಮ (35) ಸಾವನ್ನಪ್ಪಿದವರು. ಘಟನೆಯಲ್ಲಿ ಅವರ ತಾಯಿ ಚನ್ನಮ್ಮ ಅವರಿಗೆ ಗಾಯಗಳಾಗಿವೆ.
ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜೆ 6ರ ವೇಳೆಗೆ ತಾಲ್ಲೂಕಿನಲ್ಲಿ ಸಿಡಿಲು, ಗುಡುಗು, ಗಾಳಿ ಸಹಿತ ಭಾರೀ ಮಳೆ ಸುರಿದಿದೆ. ಅಲ್ಲಲ್ಲಿ ಅಲ್ಪ ಪ್ರಮಾಣದ ಹಾನಿ ಸಂಭವಿಸಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕುಷ್ಟಗಿ ವರದಿ: ತಾಲ್ಲೂಕಿನ ದೋಟಿಹಾಳ, ಹೆಸರೂರು ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಬಿರುಗಾಳಿ ಸಹಿತ ಮಳೆ ಸುರಿದಿದೆ. ಹಲವೆಡೆ ಮರಗಳು ಧರೆಗುರುಳಿವೆ. ದೋಟಿಹಾಳ ಗ್ರಾಮದಲ್ಲಿ ಹಳ್ಳದ ನೀರು ಮನೆಗಳೊಳಗೆ ನುಗ್ಗಿದೆ. ಹಿರೇತೆಮ್ಮಿನಾಳ ಗ್ರಾಮದಲ್ಲಿ ಕುಂಟಪ್ಪ ಕನ್ನಾಳ ಎಂಬುವರಿಗೆ ಸೇರಿದ ಎರಡು ಎತ್ತುಗಳು ಸಿಡಿಲಿಗೆ ಬಲಿಯಾಗಿವೆ.