ವಿಶಾಖಪಟ್ಟಣ (ಪಿಟಿಐ):
ಸಿಪಿಎಂ ಮತ್ತು ಸಿಪಿಐ ವಿಲೀನ ಪ್ರಕ್ರಿಯೆಯ ವಿಚಾರ ನಮ್ಮ ಮುಂದೆ ಇದೆ. ಆದರೆ, ಮೊದಲು ನಮ್ಮ ಪಕ್ಷವನ್ನು ಬಲಪಡಿಸಬೇಕಿದೆ
-ಸೀತಾರಾಂ ಯೆಚೂರಿ, ‘ಸಿಪಿಎಂ’ನ ಪ್ರಧಾನ ಕಾರ್ಯದರ್ಶಿ
ಸಂಸತ್ತಿನಲ್ಲಿ ಎಡಪಕ್ಷಗಳ ದೊಡ್ಡ ದನಿಯಾಗಿರುವ ಸೀತಾರಾಂ ಯೆಚೂರಿ ಅವರು ಸಿಪಿಎಂನ ಮಹತ್ವದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಡಪಕ್ಷಗಳ ನಡುವೆ ಒಗ್ಗಟ್ಟು ಮೂಡಿಸುವ ಹಾಗೂ ಹಿಂದುತ್ವವಾದಿ ಸಂಘಟನೆಗಳ ಕೋಮುವಾದಿ ಕಾರ್ಯಸೂಚಿ ವಿರುದ್ಧ ಹೋರಾಡುವ ಮಹತ್ವದ ಹೊಣೆ ಅವರ ಮುಂದಿದೆ.
ಪ್ರಕಾಶ್ ಕಾರಟ್ ಅವರ ಒಂಬತ್ತು ವರ್ಷಗಳ ಅಧಿಕಾರಾವಧಿಯ ನಂತರ ಯೆಚೂರಿ (62 ವರ್ಷ) ಸಿಪಿಎಂನ ಚುಕ್ಕಾಣಿ ವಹಿಸಿಕೊಳ್ಳುತ್ತಿದ್ದಾರೆ.
ಪ್ರಕಾಶ್ ಕಾರಟ್ ಅವರ ಅವಧಿಯಲ್ಲಿ ಪಕ್ಷ ಒಂದಾದ ಮೇಲೆ ಒಂದರಂತೆ ಸೋಲು ಅನುಭವಿಸಿ ಕಂಗೆಟ್ಟಿತ್ತು.
ಭಾನುವಾರ ಇಲ್ಲಿ ಮುಕ್ತಾಯಗೊಂಡ ಪಕ್ಷದ 21ನೇ ವಾರ್ಷಿಕ ಸಮಾವೇಶದಲ್ಲಿ ಯೆಚೂರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪಿ. ಸುಂದರಯ್ಯ, ಇಎಂಎಸ್ ನಂಬೂದರಿಪಾಡ್, ಹರಕಿಷನ್ ಸಿಂಗ್ ಸುರ್ಜಿತ್ ಹಾಗೂ ಪ್ರಕಾಶ್ ಕಾರಟ್ ನಂತರ ಈ ಹುದ್ದೆಗೆ ಏರುತ್ತಿರುವ 5ನೇ ವ್ಯಕ್ತಿ ಇವರಾಗಿದ್ದಾರೆ.
ಯೆಚೂರಿ ಅವರ ಜತೆ ಪಾಲಿಟ್ಬ್ಯುರೊದ 16 ಸದಸ್ಯರು ಹಾಗೂ ಕೇಂದ್ರ ಸಮಿತಿಯ 91 ಸದಸ್ಯರನ್ನು ಸಹ ಆಯ್ಕೆ ಮಾಡಲಾಯಿತು. ಹಿಂದಿನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಯೆಚೂರಿ ಅವರ ಹೆಸರನ್ನು ಪ್ರಸ್ತಾಪಿಸಿದರು. ಮತ್ತೊಬ್ಬ ನಾಯಕ ಕೇರಳದ ರಾಮಚಂದ್ರನ್ ಪಿಳ್ಳೈ ಅನುಮೋದಿಸಿದರು. ಇದಕ್ಕೂ ಮುನ್ನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪಿಳ್ಳೈ ಹೆಸರು ಸಹ ಕೇಳಿಬಂದಿತ್ತು. ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರನ್ನು ಕೇಂದ್ರ ಸಮಿತಿಯಿಂದ ಕೈಬಿಡಲಾಗಿದೆ.