ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ತಮ್ಮ ಹೆಸರು ಪರಿಗಣಿಸಲು ನಿರಾಕರಿಸಿರುವ ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ನಡೆಯಿಂದ ಬೇಸರಗೊಂಡಿರುವ ಹಿರಿಯ ವಕೀಲ ಗೋಪಾಲ ಸುಬ್ರಮಣಿಯಂ, ತಮ್ಮ ಹೆಸರನ್ನು ಶಿಫಾರಸು ಪಟ್ಟಿಯಿಂದ ಕೈಬಿಡುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯವರನ್ನು (ಸಿಜೆಐ) ಕೋರಿದ್ದಾರೆ.
ಈ ಕುರಿತು ಅವರು ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧಾ ಅವರಿಗೆ ಒಂಬತ್ತು ಪುಟಗಳ ಪತ್ರವೊಂದನ್ನು ಬರೆದಿದ್ದಾರೆ. ತಾವು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾಗುವುದನ್ನು ತಡೆಯುವ ಉದ್ದೇಶದಿಂದಲೇ ನರೇಂದ್ರ ಮೋದಿ ಸರ್ಕಾರ, ತಮ್ಮ ಚಾರಿತ್ರ್ಯದಲ್ಲಿ ತಪ್ಪು ಹುಡುಕುವಂತೆ ಸಿಬಿಐಗೆ ನೇರವಾಗಿ ಆದೇಶಿಸಿದೆ ಎಂದೂ ಅವರು ಆರೋಪಿಸಿದ್ದಾರೆ.
‘ಮಾಧ್ಯಮಗಳಲ್ಲಿ ಹರಿಬಿಡಲಾದ ಹಲವು ಕಥೆಗಳಿಗೆ ನಾನು ಆಹಾರವಾಗಿದ್ದೇನೆ. 30 ವರ್ಷ ನನ್ನ ಸಲಹೆ ಪಡೆಯುತ್ತಿದ್ದ ಗುಪ್ತಚರ ದಳ (ಐಬಿ), ಸಿಬಿಐ ಹಾಗೂ ಸಂಪುಟ ಸಚಿವಾಲಯಗಳು ನನ್ನ ಚಾರಿತ್ರ್ಯ ಪ್ರಶ್ನಿಸುವುದನ್ನು ನಾನು ಸಹಿಸುವುದಿಲ್ಲ’ ಎಂದಿದ್ದಾರೆ.
2ಜಿ ಹಗರಣದ ಆರೋಪಿ ಎ. ರಾಜಾ ಹಾಗೂ ನೀರಾ ರಾಡಿಯಾ ಪ್ರಕರಣದ ಜತೆ ತಮ್ಮ ಹೆಸರು ತಳಕು ಹಾಕಿರುವುದಕ್ಕೆ ಅವರು ಸಿಬಿಐಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ರಾಜಾ ಅವರನ್ನು ನಾನು ಜೀವನದಲ್ಲಿ ಒಂದು ಬಾರಿ ಮಾತ್ರ ಭೇಟಿಯಾಗಿದ್ದೇನೆ. ಆಗಿನ್ನೂ ಅವರು 2ಜಿ ಹಗರಣದಲ್ಲಿ ಆರೋಪಿಯಾಗಿರಲಿಲ್ಲ. ರಾಜಾ ಜತೆ ನಾನು ಕೈಜೋಡಿಸಿದ್ದೆ ಎಂದು ಆರೋಪಿಸಲಾಗಿದೆ. ಆದರೆ, ಸಾಲಿಸಿಟರ್ ಜನರಲ್ ಆಗಿದ್ದಾಗ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರಾಜಾ ವಿರುದ್ಧದ ತನಿಖೆ ಹಾಗೂ ಕಾನೂನು ಕ್ರಮ ಕೈಬಿಡಲು ಸಾಧ್ಯವಿಲ್ಲ ಎಂದು ಸಲಹೆ ನೀಡಿದ್ದೆ.
‘ನೀರಾ ರಾಡಿಯಾ ಟೇಪ್ಗಳನ್ನು ಸುಪ್ರೀಂಕೋರ್ಟ್ ನನಗೆ ಹಸ್ತಾಂತರಿಸಿತ್ತು. ಈ ಟೇಪ್ಗಳಲ್ಲಿ ಏನಿದೆ ಎಂದು ತನಿಖೆ ಮಾಡಬೇಕು ಎಂದೂ ನಾನೇ ಪಟ್ಟುಹಿಡಿದಿದ್ದೆ’ ಎಂದೂ ಅವರು ಹೇಳಿದ್ದಾರೆ.
ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಸಾಲಿಸಿಟರ್ ಜನರಲ್ ಆಗಿ ಜವಾಬ್ದಾರಿ ನಿರ್ವಹಿಸಿದ್ದ 56 ವರ್ಷದ ಸುಬ್ರಮಣಿಯಂ ಹಾಗೂ ಇನ್ನಿತರ ಕೆಲವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಬಹುದು ಎಂದು ನೇಮಕಾತಿ ಸಮಿತಿ ಶಿಫಾರಸು ಮಾಡಿತ್ತು.
ರೋಹಿಂಟನ್ ನಾರಿಮನ್, ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಆದರ್ಶ ಕುಮಾರ್ ಗೋಯಲ್ ಅವರ ಹೆಸರುಗಳನ್ನು ಪರಿಗಣಿಸಿರುವ ಸರ್ಕಾರ ಸುಬ್ರಮಣಿಯಂ ಅವರ ಕಡತವನ್ನು ಮಾತ್ರ ವಾಪಸ್ ಕಳುಹಿಸಿದೆ.
ಸುಬ್ರಮಣಿಯಂ ಅವರ ಹೆಸರನ್ನು ತಿರಸ್ಕರಿಸಿರುವ ಬಗ್ಗೆ ಸರ್ಕಾರ ಅಧಿಕೃತವಾಗಿ ಯಾವ ಹೇಳಿಕೆಯನ್ನೂ ನೀಡಿಲ್ಲ.
ಆದರೆ, ಸಿಬಿಐ ಪರ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲೇ ‘2ಜಿ’ ಹಗರಣದ ಆರೋಪಿಗಳ ಪರ ವಕೀಲರೊಂದಿಗೆ ಮಾತುಕತೆ ನಡೆಸಲು ಅನುಕೂಲ ಮಾಡಿಕೊಟ್ಟಿದ್ದರಲ್ಲಿ ಅವರ ಪಾತ್ರದ ಬಗ್ಗೆ ಸಿಬಿಐ ವಿಚಾರಣೆಗೆ ಒಳಪಡಿಸಿತ್ತು ಎಂಬ ವರದಿಯನ್ನು ಆಧರಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿವೆ.
ಮತ್ತೊಂದು ಅನುಮಾನ: ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ನ ಸಹಾಯಕರಾಗಿದ್ದ (ಅಮಿಕಸ್ ಕ್ಯೂರಿ) ಸುಬ್ರಮಣಿಯಂ, ನರೇಂದ್ರ ಮೋದಿ ಅವರ ನೇತೃತ್ವದ ಗುಜರಾತ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಸುಬ್ರಮಣಿಯಂ ಅವರ ವಾದದಿಂದಾಗಿ ಸುಪ್ರೀಂ ಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಿತ್ತು. ಇದು ಗುಜರಾತ್ ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸಿತ್ತು. ಈ ಹಿನ್ನೆಲೆಯಲ್ಲಿ ಸುಬ್ರಮಣಿಯಂ ಅವರ ಹೆಸರನ್ನು ತಿರಸ್ಕರಿಸಿದೆ ಎಂಬ ಗುಮಾನಿಗಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.