ಭುವನೇಶ್ವರ (ಪಿಟಿಐ): ಶಾರದಾ ಚಿಟ್ ಫಂಡ್ನ ಬಹುಕೋಟಿ ಹಗರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ ಶನಿವಾರವೂ ಕಾರ್ಯಾಚರಣೆಯನ್ನು ಮುಂದುವರಿಸಿದ್ದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆಪ್ತ ಸಹಾಯಕ ಸರೋಜ್ ಸಾಹು ಅವರನ್ನು ತನಿಖೆಗಾಗಿ ತನ್ನ ಕಚೇರಿಗೆ ಕರೆಸಿಕೊಂಡಿದೆ.
ಪಟ್ನಾಯಕ್ ಅವರ ‘ನವೀನ್ ನಿವಾಸ’ ಹಾಗೂ ಆಡಳಿತಾರೂಢ ಬಿಜೆಡಿ ಕಚೇರಿಯಲ್ಲಿ ಕೆಲಸ ನಿರ್ವ ಹಿಸುವ ಸಾಹು ಬಂಧನವು ಮುಖ್ಯಮಂತ್ರಿಗಳಿಗೆ ಮುಜುಗರ ತಂದೊಡ್ಡಿದೆ ಎನ್ನಲಾಗಿದೆ.
‘ಸಿಬಿಐ ಅಧಿಕಾರಿಗಳಿಂದ ನನಗೆ ಕರೆ ಬಂತು. ಅದಕ್ಕಾಗಿ ನಾನು ಇಲ್ಲಿ ಬಂದಿದ್ದೇನೆ. ಆದರೆ ನನ್ನನ್ನು ಯಾವ ಕಾರಣಕ್ಕೆ ಕರೆಸಿಕೊಂಡಿದ್ದಾರೆ ಎಂದು ತಿಳಿದಿಲ್ಲ’ ಎಂದು ಸಾಹು ಸಿಬಿಐ ಕಚೇರಿಗೆ ಪ್ರವೇಶಿಸುವಾಗ ಸುದ್ದಿಗಾರರೊಂದಿಗೆ ಹೇಳಿದರು.
ಆದರೆ ಚಿಟ್ ಫಂಡ್ ಹಗರಣದಲ್ಲಿ ಬಿಜೆಡಿ ಪಕ್ಷ ಹಾಗೂ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದು ಪಟ್ನಾಯಕ್ ಸ್ಪಷ್ಟ ಪಡಿಸಿದ್ದಾರೆ.
ಬೋಸ್ ಪೊಲೀಸ್ ವಶಕ್ಕೆ(ಕೋಲ್ಕತಾ ವರದಿ): ಸಿಬಿಐನಿಂದ ಬಂಧನಕ್ಕೊಳಗಾಗಿರುವ ರಾಜ್ಯಸಭಾ ಸದಸ್ಯ, ತೃಣಮೂಲ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ ಸೃಂಜಯ್ ಬೋಸ್ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.