ನವದೆಹಲಿ (ಪಿಟಿಐ): ಮಾರುವೇಷ ಕಾರ್ಯಾಚರಣೆ ಕುರಿತ ತನಿಖೆ ನಡೆಸುತ್ತಿರುವ ಸಿಬಿಐ ಮುಂದೆ ಮಂಗಳವಾರ ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಹಾಜರಾದರು.
ಬೆಳಿಗ್ಗೆ 11 ಗಂಟೆಗೆ ಸಿಬಿಐ ಪ್ರಧಾನ ಕಚೇರಿಯಲ್ಲಿ ಕೆಲವು ಬೆಂಬಲಿಗರು ಹಾಗೂ ಶಾಸಕರೊಂದಿಗೆ ರಾವತ್ ಹಾಜರಾಗಿ ವಿವರಣೆ ನೀಡಿದರು.
ಉತ್ತರಾಖಂಡ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಭಿನ್ನಮತೀಯ ಕಾಂಗ್ರೆಸ್ ಶಾಸಕರಿಗೆ ಹರೀಶ್ ರಾವತ್ ಅವರು ಆಮಿಷವೊಡ್ಡಿದ್ದಾರೆ ಎನ್ನಲಾದ ದೃಶ್ಯಾವಳಿಗಳನ್ನು ಮಾರುವೇಷದ ಕಾರ್ಯಾಚರಣೆ ಮೂಲಕ ಸೆರೆ ಹಿಡಿಯಲಾಗಿತ್ತು. ಬಂಡಾಯ ಶಾಸಕರು ಈ ಕುರಿತು ಸಿ.ಡಿಯನ್ನು ಬಿಡುಗಡೆ ಮಾಡಿದ್ದರು. ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ್ದ ಸಂದರ್ಭದಲ್ಲಿ ಈ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಆದೇಶಿಸಲಾಗಿತ್ತು.
ಮೋದಿ ವಿರುದ್ಧ ಆಕ್ರೋಶ: ಸಿಬಿಐ ಮುಂದೆ ಹಾಜರಾದ ನಂತರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ರಾವತ್, ‘ನಾವು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ವಿರುದ್ಧ ಹೋರಾಟ ಮಾಡುತ್ತಿಲ್ಲ. ಆದರೆ, ಅವರು ಒಂದು ವಿಷಯವನ್ನು ನೆನಪಿಕೊಟ್ಟುಕೊಂಡು ನಮಗೆ ತೊಂದರೆ ನೀಡಬಾರದು. ಕೆಲವು ಬಾರಿ ಸಣ್ಣ ಇರುವೆಯೂ ಆನೆಗೆ ತೊಂದರೆ ಕೊಡಬಹುದು’ ಎಂದರು.
‘ಸಿಬಿಐ ಮುಂದೆ ಮತ್ತೆ ಜೂನ್ 7ರಂದು ಹಾಜರಾಗಿ ವಿವರಣೆ ನೀಡುತ್ತೇನೆ’ ಎಂದು ಅವರು ತಿಳಿಸಿದರು.