ನವದೆಹಲಿ (ಪಿಟಿಐ): ಸಿಬಿಐ ಮುಖ್ಯಸ್ಥರ ನೇಮಕಕ್ಕೆ ಅನುವು ಮಾಡಿಕೊಡುವ ತಿದ್ದುಪಡಿ ಮಸೂದೆಯು ಕಾಂಗ್ರೆಸ್ನ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ಬುಧವಾರ ಅಂಗೀಕಾರಗೊಂಡಿತು.
ಈ ಮುಂಚಿನ ನಿಯಮದ ಪ್ರಕಾರ, ಸಿಬಿಐ ನಿರ್ದೇಶಕರ ನೇಮಕಾತಿ ಸಮಿತಿಯ ಮೂವರು ಸದಸ್ಯರಲ್ಲಿ ಲೋಕಸಭೆಯ ಅಧಿಕೃತ ಪ್ರತಿಪಕ್ಷದ ನಾಯಕರೂ ಇರಬೇಕೆಂಬುದು ಕಡ್ಡಾಯವಾಗಿತ್ತು. ಆದರೆ ಈಗ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷ ಇಲ್ಲ. ಹೀಗಾಗಿ, ‘ಲೋಕಸಭೆಯ ಅತಿದೊಡ್ಡ ಪ್ರತಿಪಕ್ಷದ ನಾಯಕ ಈ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿರುತ್ತಾರೆ’ ಎಂದು ತಿದ್ದುಪಡಿ ಮಾಡಲಾಗಿದೆ.
‘ಸಮಿತಿಯಲ್ಲಿ ಯಾವುದೇ ಸದಸ್ಯ ಹುದ್ದೆ ಖಾಲಿ ಇದ್ದ ಮಾತ್ರಕ್ಕೆ ಅಥವಾ ಯಾವುದೇ ಸದಸ್ಯ ಗೈರುಹಾಜರಿಯಲ್ಲಿದ್ದರೆ ಅದಕ್ಕಾಗಿ ಸಿಬಿಐ ನಿರ್ದೇಶಕರ ನೇಮಕಾತಿ ಅನೂರ್ಜಿತವಾಗುವುದಿಲ್ಲ’ ಎಂಬ ನಿಬಂಧನೆಯನ್ನೂ ತಿದ್ದುಪಡಿ ಒಳಗೊಂಡಿದೆ. ಲೋಕಸಭೆಯಲ್ಲಿ ದೊಡ್ಡ ಪ್ರತಿಪಕ್ಷವಾದ ತಮ್ಮನ್ನು ಸಿಬಿಐ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆಯಿಂದ ಹೊರಗಿಡಬೇಕು ಎಂಬ ಉದ್ದೇಶದಿಂದಲೇ ಈ ತಿದ್ದುಪಡಿ ತರಲಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಪ್ರತಿಪಕ್ಷವನ್ನು ಅವಮಾನಿಸಲೆಂದೇ ಹಾಗೂ ಸಿಬಿಐ ನಿರ್ದೇಶಕರ ನೇಮಕಾತಿಯಿಂದ ಕಾಂಗ್ರೆಸ್ಸನ್ನು ಪೂರ್ತಿಯಾಗಿ ಹೊರಗಿಡಬೇಕು ಎಂಬ ದುರುದ್ದೇಶದಿಂದಲೇ ಈ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕ ಖರ್ಗೆ ಅವರು ಆಪಾದಿಸಿದರು.
ಬಿಜೆಪಿ ಸದಸ್ಯರಾದ ತಥಾಗತ್ ಸಪ್ತತಿ ಮತ್ತು ಭರ್ತೃಹರಿ ಮಹ್ತಾಬ್ ಅವರು ಇದನ್ನು ಬೆಂಬಲಿಸಿದರು.
‘ಈ ಹಿಂದೆ ಯಾವತ್ತೂ ಸಿಬಿಐ ನಿರ್ದೇಶಕರ ನೇಮಕಾತಿ ಈ ರೀತಿ ನಡೆದ ಉದಾಹರಣೆಯೇ ಇಲ್ಲ. ಒಂದೊಮ್ಮೆ ಹೀಗೆ ಎಂದಾದ್ದರೂ ನಡೆದಿದ್ದರೆ ಅದನ್ನು ಬಹಿರಂಗಪಡಿಸಬೇಕು’ ಎಂದೂ ಕಾಂಗ್ರೆಸ್ ಹೇಳಿತು. ಕಾಂಗ್ರೆಸ್ ಸಂಸದ ಮೊಯಿಲಿ ಅವರೂ ಈ ತಿದ್ದುಪಡಿಗಳನ್ನು ತೀವ್ರವಾಗಿ ವಿರೋಧಿಸಿದರು.