ಜಮ್ಮು (ಪಿಟಿಐ): ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ನಿರ್ಗಲ್ಲು ಪ್ರದೇಶದಲ್ಲಿ ಫೆಬ್ರುವರಿ 3ರಂದು ಸಂಭವಿಸಿದ್ದ ಹಿಮಕುಸಿದಲ್ಲಿ ರಾಜ್ಯದ ಯೋಧ ಹನುಮಂತಪ್ಪ ಕೊಪ್ಪದ ಅವರು ಪವಾಡಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದಾರೆ. ಹನುಮಂತಪ್ಪ ಅವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಬೆಟದೂರಿನವರು.
ಕಳೆದ ಆರು ದಿನಗಳಿಂದ ಹಿಮರಾಶಿಯ 25 ಅಡಿ ಆಳದಲ್ಲಿ ಅವರು ಗಂಭೀರ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದ್ದಾರೆ. ನಾಪತ್ತೆಯಾಗಿದ್ದಾಗಿನಿಂದ ಸೇನೆಯು ವಾಯುಪಡೆಯ ನೆರವಿನೊಂದಿಗೆ ಸತತವಾಗಿ ಕಾರ್ಯಾಚರಣೆ ನಡೆಸುತ್ತಿತ್ತು.
'ಅದೊಂದು ನಂಬಲಸಾಧ್ಯವಾದ ರಕ್ಷಣಾ ಕಾರ್ಯಾಚರಣೆ. ಲ್ಯಾನ್ಸ್ ನಾಯಕ್ ಹನುಮಂತಪ್ಪ ಅವರನ್ನು ಸೇನಾ ಆಸ್ಪತ್ರೆಗೆ ಕರೆದೊಯ್ಯುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಸೇನೆಯ ನಾರ್ತರ್ನ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿ.ಎಸ್.ಹೂಡಾ ಅವರು ಸೋಮವಾರ ತಡರಾತ್ರಿ ತಿಳಿಸಿದ್ದಾರೆ.
ಫೆಬ್ರುವರಿ 3ರಂದು ಸಂಭವಿಸಿದ್ದ ಭೀಕರ ಹಿಮಕುಸಿತ ಘಟನೆಯಲ್ಲಿ ಒಬ್ಬರು ಜೆಸಿಒ ಅಧಿಕಾರಿ ಸೇರಿದಂತೆ ಹತ್ತು ಯೋಧರು ಕಾಣೆಯಾಗಿದ್ದರು.