ನವದೆಹಲಿ: ಕೇಂದ್ರ ನೇರ ತೆರಿಗೆ ಮಂಡಳಿಯ ಮಾಜಿ ಅಧ್ಯಕ್ಷ ಕೆ.ವಿ. ಚೌಧರಿ ಅವರನ್ನು ಜಾಗೃತ ದಳದ ಮುಖ್ಯ ಆಯುಕ್ತರಾಗಿ (ಸಿವಿಸಿ) ನೇಮಿಸುವ ಸರ್ಕಾರಕ್ಕೆ ಪ್ರಸ್ತಾಪಕ್ಕೆ ಭ್ರಷ್ಟಾಚಾರ ವಿರೋಧಿ ಆಂದೋಲನದ ಪ್ರಶಾಂತ್ ಭೂಷಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐನ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ಅವರನ್ನು ಭೇಟಿಯಾದವರ ಪಟ್ಟಿಯಲ್ಲಿ ಚೌಧರಿ ಅವರ ಹೆಸರು ನಾಲ್ಕು ಬಾರಿ ಕಾಣಿಸಿಕೊಂಡಿತ್ತು’ ಎಂದು ಅವರು ವಿವರಿಸಿದರು.
‘ಮೇ 20ರಂದು ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ರಾಜನಾಥ್ ಸಿಂಗ್ ಹಾಗೂ ಜೇಟ್ಲಿ ಅವರಿಗೆ ಪತ್ರ ಬರೆದು, ‘ಸಿವಿಸಿ’ ಅಂತಿಮ ಪಟ್ಟಿಯಲ್ಲಿ ಇರುವವರ ಹೆಸರು ಬಹಿರಂಗಪಡಿಸುವಂತೆ ಹಾಗೂ ಚೌಧರಿ ಅವರನ್ನು ಈ ಹುದ್ದೆಗೆ ಪರಿಗಣಿಸದಂತೆ ಮನವಿ ಮಾಡಿಕೊಂ
ಡಿದ್ದೆ ’ ಎಂದು ಭೂಷಣ್ ತಿಳಿಸಿದ್ದಾರೆ.
‘ಪ್ರಧಾನಿ ಮೋದಿ, ಗೃಹಸಚಿವ ರಾಜನಾಥ್ ಸಿಂಗ್ ಹಾಗೂ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿದ್ದ ಸಭೆಯಲ್ಲಿ ಅವರ ಹೆಸರು ಅಂತಿಮಗೊಳಿಸಲಾಗಿದೆ. ಇದನ್ನು ನೋಡಿದಾಗ ಕಾಂಗ್ರೆಸ್ ಮತ್ತು ಬಿಜೆಪಿ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಹೊಂದಾಣಿಕೆ ಮಾಡಿಕೊಂಡಿವೆ ಮತ್ತು ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲು ಅಪ್ರಮಾಣಿಕ ವ್ಯಕ್ತಿಯನ್ನು ಇಂತಹ ಮಹತ್ವದ ಹುದ್ದೆಗೆ ನೇಮಿಸಲು ಮುಂದಾಗಿವೆ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಅವರು ಆರೋಪಿಸಿದ್ದಾರೆ.
***
ಸ್ಟಾಕ್ ಗುರು ಹಗರಣದಲ್ಲಿ ಚೌಧರಿ ಪಾತ್ರದ ಕುರಿತು ಸಿಬಿಐ ತನಿಖೆ ನಡೆಸಿತ್ತು. ಇಂತಹ ವ್ಯಕ್ತಿಯನ್ನು ‘ಸಿವಿಸಿ’ ಹುದ್ದೆಗೆ ನೇಮಿಸುವ ಅಗತ್ಯ ಏನಿದೆ?
-ಪ್ರಶಾಂತ್ ಭೂಷಣ್, ಭ್ರಷ್ಟಾಚಾರ ವಿರೋಧಿ ಆಂದೋಲನ ನಾಯಕ