ನವದೆಹಲಿ (ಪಿಟಿಐ): ಕೇಂದ್ರೀಯ ಜಾಗೃತ ಆಯುಕ್ತರು (ಸಿವಿಸಿ) ಮತ್ತು ಜಾಗೃತ ಆಯುಕ್ತರ (ವಿಸಿ) ನೇಮಕಕ್ಕೂ ಮುನ್ನ ತನ್ನ ಅನುಮತಿ ಪಡೆಯುವಂತೆ ಹಾಗೂ ನೇಮಕಾತಿ ಪ್ರಕ್ರಿಯೆಯ ವಿವರ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಮತ್ತು ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕುರ್ ಅವರನ್ನೊಳಗೊಂಡ ಪೀಠ, ಈಗಿನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸುವಂತೆಯೂ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ವಿಚಾರಣೆಯಲ್ಲಿ ಕೇಂದ್ರ ಸರ್ಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು, ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲುಪತ್ರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವುದಾಗಿ ಪೀಠಕ್ಕೆ ತಿಳಿಸಿದರು. ಜಾಗೃತ ಆಡಳಿತದಲ್ಲಿ ಸಮಗ್ರತೆ, ನಿರ್ವಹಣೆ ಮತ್ತು ತರಬೇತಿಗಾಗಿರುವ ಸರ್ಕಾರೇತರ ಸಂಸ್ಥೆಯೊಂದು (ಎನ್ಜಿಒ) ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ಪೀಠ ವಿಚಾರಣೆ ನಡೆಸಿತು.
ಕ್ರಮವಾಗಿ ಸೆಪ್ಟೆಂಬರ್ 7 ಮತ್ತು 28ರಂದು ನಿವೃತ್ತರಾದ ವಿಸಿ ಜೆ.ಎಂ. ಗರ್ಗ್ ಮತ್ತು ಸಿವಿಸಿ ಪ್ರದೀಪ್ ಕುಮಾ-ರ್ ಅವರ ಅಧಿಕಾರಾವಧಿ ಮುಗಿದ ಬಳಿಕ ಖಾಲಿಯಾದ ಹುದ್ದೆಗಳ-ನ್ನು ಸರ್ಕಾರ ಯಾವುದೇ ಪ್ರಚಾರ ನೀಡದೆ ಭರ್ತಿ ಮಾಡಲು ಹೊರಟಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.