ಕಠ್ಮಂಡು (ಪಿಟಿಐ): ಈ ತಿಂಗಳ 26, 27ರಂದು ನಡೆಯಲಿರುವ ಸಾರ್ಕ್ ಸಮ್ಮೇಳನದ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೀತೆಯ ಜನ್ಮಸ್ಥಳ ಎಂದು ಹೇಳಲಾಗಿರುವ ಪ್ರಾಚೀನ ಪಟ್ಟಣ ಜನಕಪುರಕ್ಕೆ ನೀಡಲು ಉದ್ದೇಶಿಸಿದ್ದ ಭೇಟಿ ರದ್ದಾಗಿರುವುದನ್ನು ವಿರೋಧಿಸಿ ಜನಕಪುರದಲ್ಲಿ ರಾಜಕೀಯ ಪಕ್ಷಗಳು ಶುಕ್ರವಾರ ಬಂದ್ ಆಚರಿಸಿದವು.
22 ರಾಜಕೀಯ ಪಕ್ಷಗಳು ಬಂದ್ಗೆ ಕರೆ ನೀಡಿದ್ದವು. ಬಂದ್ನಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು. ‘ಜನಕಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿರುವ ಕಾರಣ ನಾವು ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದೇವೆ.
ಮೋದಿ ಭೇಟಿ ರದ್ದುಗೊಂಡಿರುವ ಬಗ್ಗೆ ನಮಗೆ ಯಾವುದೇ ಅಧಿಕೃತ ಮಾಹಿತಿ ತಲುಪಿಲ್ಲ’ ಎಂದು ಗೃಹ ಕಾರ್ಯದರ್ಶಿ ಸೂರ್ಯ ಪ್ರಸಾದ್ ಸೈವಲ್ ಹೇಳಿದ್ದಾರೆ.