ನವದೆಹಲಿ (ಪಿಟಿಐ): ಹರಳು ಮತ್ತು ಚಿನ್ನಾಭರಣ ರಫ್ತು ವಹಿವಾಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ಚಿನ್ನ ಆಮದು ಸುಂಕ ತಗ್ಗಿಸಲು ಕೇಂದ್ರ ಹಣಕಾಸು ಸಚಿವಾಲಯ ಮುಂದಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಹರಳು ಮತ್ತು ಚಿನ್ನಾಭರಣ ಉದ್ಯಮ ಬಹಳಷ್ಟು ಸಮಸ್ಯೆ ಎದುರಿಸುತ್ತಿದೆ. ಚಿನ್ನದ ಆಮದಿನ ಮೇಲೆ ಶೇ 10ರಷ್ಟು ಸುಂಕ ವಿಧಿಸಿರುವ ಕಾರಣದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಪೈಪೋಟಿ ಎದುರಿಸಲು ಉದ್ಯಮಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.
ಇದನ್ನು ಹಣಕಾಸು ಸಚಿವಾಲಯದ ಗಮನಕ್ಕೆ ತರಲಾಗಿದೆ ಎಂದೂ ಅವರು ತಿಳಿಸಿದರು. ಅಕ್ಟೋಬರ್ನಲ್ಲಿ ಹರಳು ಮತ್ತು ಚಿನ್ನಾಭರಣದ ರಫ್ತು ವಹಿವಾಟು ಶೇ 13ರಷ್ಟು ಕುಸಿದಿದ್ದು, ₹19,800 ಕೋಟಿಗೆ ಇಳಿಕೆ ಕಂಡಿದೆ.
ಆಗಸ್ಟ್ನಲ್ಲಿ ₹33 ಸಾವಿರ ಕೋಟಿಗಳಷ್ಟು ವಹಿವಾಟು ನಡೆಸಿತ್ತು. ಆ ಬಳಿಕ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಇಳಿಮುಖವಾಗಿದೆ.
ಚಾಲ್ತಿ ಖಾತೆ ಕೊರತೆಯನ್ನು ಪರಿಗಣಿಸಿ ಸರ್ಕಾರ ಚಿನ್ನದ ಆಮದು ಸುಂಕ ಪರಾಮರ್ಶೆ ನಡೆಸುತ್ತದೆ.