ರೈಲ್ವೆ ಬಜೆಟ್ ಮಂಡನೆ ಮೂಲಕ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮೊದಲ ಅಗ್ನಿ ಪರೀಕ್ಷೆಯನ್ನು ಎದುರಿಸಿದೆ. ಬಜೆಟ್ ಮಂಡನೆಗೆ ಮುಂಚೆಯೇ ರೈಲ್ವೆ ಪ್ರಯಾಣ ದರದಲ್ಲಿಶೇ 14.2ರಷ್ಟು ಏರಿಕೆಯ ಕಹಿ ಉಣಿಸಿದ್ದ ರೈಲ್ವೆ ಸಚಿವ ಸದಾನಂದ ಗೌಡ ಅವರು ತಮ್ಮ ಚೊಚ್ಚಲು ರೈಲ್ವೆ ಬಜೆಟ್ನಲ್ಲಿ ರೈಲ್ವೆ ಸುಧಾರಣೆಯ ಭರವಸೆಗಳನ್ನು ನೀಡಿದ್ದಾರೆ.
ಮೂಲ ಸೌಕರ್ಯ ವಲಯವಾಗಿ ಮಾತ್ರವಲ್ಲ ಸೇವಾ ವಲಯವಾಗಿಯೂ ರೈಲ್ವೆಯನ್ನು ಪರಿಗಣಿಸಿರುವಂತಹ ದೃಷ್ಟಿಕೋನ ಎದ್ದು ಕಾಣಿಸುವಂತಹದ್ದು. ಜನಪ್ರಿಯ ಬಜೆಟ್ಗಳ ಹಾವಳಿಯಿಂದ ಸೊರಗಿ ಹೋಗಿರುವ ರೈಲ್ವೆಯನ್ನು ಬಲಗೊಳಿಸುವ ಪ್ರಯತ್ನ ಹೊಸತನದ್ದಾಗಿದೆ. ಟಿಕೆಟ್ ಖರೀದಿಯಿಂದ ಹಿಡಿದು ರೈಲು ಪ್ರಯಾಣದ ಎಲ್ಲಾ ಹಂತಗಳಲ್ಲೂ ಆಧುನೀಕರಣದ ಸ್ಪರ್ಶಕ್ಕೆ ಮುಂದಾಗಿರುವುದು ಸ್ವಾಗತಾರ್ಹ.
ಹಿಂದಿನ ಸರ್ಕಾರಗಳ ಬಜೆಟ್ಗಳು ಹೊಸ ಯೋಜನೆಗಳನ್ನು ಪ್ರಕಟಿಸುವುದಕ್ಕೆ ಸೀಮಿತವಾಗಿದ್ದವು. ಆದರೆ ಈಗ ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ ಆದ್ಯತೆ ನೀಡಲಾಗುವುದು ಎಂಬಂಥ ಮಾತುಗಳನ್ನು ಹೇಳಿರುವ ಕೇಂದ್ರ ಸರ್ಕಾರ ಅದಕ್ಕೆ ಬದ್ಧವಾಗಬೇಕಾಗಿದೆ. ವಿಸ್ತೃತವಾಗಿರುವ ಈ ಬಜೆಟ್ನಲ್ಲಿ ಜೈವಿಕ ಶೌಚಾಲಯಗಳಿಂದ ಹಿಡಿದು ಬುಲೆಟ್ ಟ್ರೈನ್ವರೆಗೆ ಪ್ರಸ್ತಾಪವಿದೆ.
ರಾಷ್ಟ್ರದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಅತಿ ವೇಗದ ರೈಲುಗಳ ವಜ್ರ ಚತುಷ್ಕೋನ ಜಾಲಕ್ಕೆ ಆರಂಭದ ಮೊತ್ತವಾಗಿ ರೂ. 100 ಕೋಟಿ ತೆಗೆದಿರಿಸಲಾಗಿದೆ. ಇ–ಟಿಕೆಟಿಂಗ್ ವ್ಯವಸ್ಥೆ ಸುಧಾರಣೆ, ಸ್ವಚ್ಛತೆಗೆ ಆದ್ಯತೆ, ಸಿದ್ಧ ಆಹಾರದ ಲಭ್ಯತೆ, ಹಿರಿಯರಿಗೆ ಹಾಗೂ ಅಂಗವಿಕಲರಿಗೆ ಹೆಚ್ಚಿನ ಸೌಲಭ್ಯ, ಆಯ್ದ ಪ್ರಮುಖ ರೈಲುಗಳಲ್ಲಿಯೇ ರೈಲ್ವೆ ಕಚೇರಿ ಇತ್ಯಾದಿ ಹಲವು ಕ್ರಮಗಳನ್ನು ಪ್ರಕಟಿಸಿರುವುದು ಗ್ರಾಹಕ ಸ್ನೇಹಿಯಾಗಿದೆ.
ರೈಲ್ವೆಯನ್ನು ಆಧುನೀಕರಿಸುವ ಪ್ರಕ್ರಿಯೆಗೆ ದೊಡ್ಡ ಪ್ರಮಾಣದ ಸಂಪನ್ಮೂಲ ಬೇಕು ಎಂಬುದು ಸರ್ವವಿದಿತ. ಇದಕ್ಕಾಗಿ ಸರ್ಕಾರ ಹಾಗೂ ಖಾಸಗಿ ಪಾಲ್ಗೊಳ್ಳುವಿಕೆ (ಪಿಪಿಪಿ) ಮಾದರಿ ಮತ್ತು ವಿದೇಶಿ ನೇರ ಬಂಡವಾಳದ (ಎಫ್ಡಿಐ) ಮೂಲಕ ಸಂಪನ್ಮೂಲ ಕ್ರೋಡೀಕರಿಸುವ ಪ್ರಸ್ತಾಪ ಮಾಡಲಾಗಿದೆ. ಪಿಪಿಪಿ ಮಾದರಿ ಹಿಂದೆ ಹೆಚ್ಚು ಯಶಸ್ವಿಯಾಗಿಲ್ಲ. ಇದು ಭವಿಷ್ಯದಲ್ಲಿ ಯಶಸ್ವಿಯಾಗಬೇಕಾದಲ್ಲಿ ಸರ್ಕಾರದ ನೀತಿಗಳು ಹೆಚ್ಚಿನ ಮಟ್ಟದಲ್ಲಿ ಹೂಡಿಕೆ ಸ್ನೇಹಿಯಾಗಿರಬೇಕಾಗುತ್ತವೆ. ಇನ್ನು ಎಫ್ಡಿಐಗೆ ಕೇಂದ್ರ ಸಂಪುಟದ ಅನುಮತಿ ದೊರೆತು ನೀತಿಯಾಗಿ ರೂಪುಗೊಳ್ಳಲು ಸಾಕಷ್ಟು ಸಮಯ ಹಿಡಿಸಲಿದೆ.
ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ 2.3 ಕೋಟಿಯಷ್ಟು ಜನರು ತಮ್ಮ ದಿನ ನಿತ್ಯದ ಸಂಚಾರಕ್ಕೆ ರೈಲುಗಳನ್ನು ಅವಲಂಬಿಸಿದ್ದಾರೆ. ಹಾಗೆಯೇ ಪ್ರತಿದಿನ ಸಾವಿರಾರು ಟನ್ ಸರಕು ಸಾಗಣೆಯಾಗುತ್ತದೆ. ಹೀಗೆ ಭಾರತೀಯರ ದಿನನಿತ್ಯದ ಬದುಕಿನ ಜೀವರೇಖೆಯಾಗಿರುವ ರೈಲುಗಳ ಸಾಮಾಜಿಕ ಆಯಾಮ ಮಹತ್ವದ್ದು. ಈಗ ಈ ಸಾಮಾಜಿಕ ಆಯಾಮದ ಜೊತೆಗೇ ಲಾಭವನ್ನೂ ಗಳಿಸುವಂತಹ ವಾಣಿಜ್ಯವನ್ನು ಒಳಗೊಳ್ಳುವ ಸಮತೋಲನದ ದೃಷ್ಟಿಯ ಅಗತ್ಯವನ್ನು ಪ್ರತಿಪಾದಿಸಲಾಗಿದೆ.
1950ರ ದಶಕದಲ್ಲಿ ಭಾರತದ ಶೇ 90ರಷ್ಟು ಸರಕು ಸಾಗಣೆಗೆ ರೈಲನ್ನು ಅವಲಂಬಿಸಲಾಗುತ್ತಿತ್ತು. ಆದರೆ ಇಂದು ಟ್ರಕ್ಗಳ ಜೊತೆಗಿನ ಸ್ಪರ್ಧೆಯಲ್ಲಿ ಈ ಪ್ರಮಾಣ ಕೇವಲ ಶೇ 33ರಷ್ಟಿದೆ. ಈಗ ಸರಕು ಸಾಗಣೆ ಕ್ಷೇತ್ರಕ್ಕೆ ನೀಡಲಿರುವ ಆದ್ಯತೆಯೂ ಸುಧಾರಣೆಯತ್ತ ಇರಿಸಲಾಗುವ ಮತ್ತೊಂದು ಹೆಜ್ಜೆ. ಹೊಸ ರೈಲುಗಳು ಹಾಗೂ ಹೊಸ ರೈಲು ಮಾರ್ಗ ಸಮೀಕ್ಷೆ ವಿಚಾರದಲ್ಲಿ ಹಣಕಾಸು ಬಿಕ್ಕಟ್ಟಿನ ನಡುವೆಯೂ ಕರ್ನಾಟಕದ ಸಾಕಷ್ಟು ನಿರೀಕ್ಷೆಗಳು ಈಡೇರಿರುವುದು ವಿಶೇಷ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.