ಬೆಂಗಳೂರಿನ ಕೃಷ್ಣರಾಜಪುರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ದೇವಾಲಯ ನಿರ್ಮಾಣವಾಗುತ್ತಿರುವುದನ್ನು ಪ್ರಜಾಪರಿವರ್ತನಾ ವೇದಿಕೆ ವಿರೋಧಿಸಿರುವ ಸುದ್ದಿಗೆ ಪ್ರತಿಕ್ರಿಯೆ (ಪ್ರ.ವಾ., ಅ.೨೨). ಸರ್ಕಾರಿ ಜಮೀನಿನಲ್ಲಿ ಯಾವುದೇ ಧಾರ್ಮಿಕ ಕಟ್ಟಡದ ನಿರ್ಮಾಣ ಆಗುವುದು ಸುಪ್ರೀಂ ಕೋರ್ಟಿನ ಆದೇಶದ ಸ್ಪಷ್ಟ ಉಲ್ಲಂಘನೆ ಆಗುತ್ತದೆ. ತಮ್ಮ ಎದುರಲ್ಲಿಯೇ ಇಂತಹ ಅಕ್ರಮ ನಡೆಯುತ್ತಿದ್ದರೂ, ಕಾನೂನಿನ ಪಾಲನೆ ಮಾಡಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಸುಮ್ಮನಿರುವುದು ಅನುಮಾನಕ್ಕೆ ಕಾರಣವಾಗುತ್ತಿದೆ.
ಸಾರ್ವಜನಿಕರ ಅಭಿಪ್ರಾಯ ಪಡೆದು ದೇವಸ್ಥಾನ ನಿರ್ಮಾಣ ಮಾಡುತ್ತಿರುವುದಾಗಿ ಈ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರು ಸಮರ್ಥನೆ ಮಾಡಿಕೊಂಡಿರುವುದು ಗಮನಾರ್ಹ. ಅನಧಿಕೃತ ಗುಡಿ ನಿರ್ಮಿಸುವವರು ಮಾತ್ರ ಸಾರ್ವಜನಿಕರೇ? ಅಂತಹ ಅಕ್ರಮಗಳನ್ನು ವಿರೋಧಿಸುವವರೂ ಸಾರ್ವಜನಿಕರ ಲ್ಲವೇ? ಸಾರ್ವಜನಿಕ ಸ್ಥಳಗಳು ಪರಿಸರದ ಹಿತದೃಷ್ಟಿಯಿಂದ ಉದ್ಯಾನಗಳಾಗಿ ಮಾತ್ರವೇ ಉಳಿಯಬೇಕು. ಘನ ನ್ಯಾಯಾಲಯವು ತನ್ನ ಆದೇಶಗಳ ಪಾಲನೆಯಾಗದಿದ್ದಲ್ಲಿ ಸ್ಥಳೀಯ ಅಧಿಕಾರಿಗಳನ್ನೇ ಅದಕ್ಕೆ ಹೊಣೆ ಮಾಡಿ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೆ ಮಾತ್ರ ಇಂತಹ ಎಷ್ಟೋ ಅಕ್ರಮಗಳಿಗೆ ಮೂಗುದಾರ ಹಾಕಬಹುದು.