ನವದೆಹಲಿ (ಪಿಟಿಐ): ಹೂಡಿಕೆದಾರರಿಗೆ ವಂಚಿಸಿ-ರುವ ಪ್ರಕರಣದಲ್ಲಿ 3 ತಿಂಗಳಿನಿಂದ ಜೈಲಿನಲ್ಲಿರುವ ಸಹಾರಾ ಸಮೂಹದ ಅಧ್ಯಕ್ಷ ಸುಬ್ರತೊ ರಾಯ್ ಗೃಹಬಂಧನದಲ್ಲಿಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಬುಧವಾರ ವಜಾ ಮಾಡಿದೆ.
ಆದರೆ ₨ 5,000 ಕೋಟಿ ನಗದು ಕ್ರೋಡೀಕರಿಸುವ ಸಲುವಾಗಿ ಆಸ್ತಿ ಮಾರಾಟ ಮಾಡಲು ರಾಯ್ ಅವರಿಗೆ ಕೋರ್ಟ್ ಅವಕಾಶ ನೀಡಿದೆ. ಜೈಲಿನಿಂದ ಬಿಡುಗಡೆಯಾ-ಗುವುದಕ್ಕೆ ಹೂಡಿಕೆದಾರರಿಗೆ ಮರುಪಾವತಿ ಖಾತ್ರಿ ಹಣವಾಗಿ ಮತ್ತೆ 5,000 ಕೋಟಿ ರೂಪಾಯಿಗಳನ್ನು ಬ್ಯಾಂಕ್ ಖಾತೆಯಲ್ಲಿ ಇಡಬೇಕು’ ಎಂದೂ ನ್ಯಾಯಾಲಯ ಹೇಳಿದೆ.
‘ಜೈಲಿನಿಂದ ಹೊರಗೆ ಸ್ಥಳಾಂತರಿಸಲು ಕೋರಿ ಸುಬ್ರತೊ ಸಲ್ಲಿಸಿದ್ದ ಮನವಿಯನ್ನು ವಜಾ ಮಾಡಲಾಗಿದೆ’ ಎಂದು ನ್ಯಾಯಮೂರ್ತಿಗಳಾದ ಟಿ.ಎಸ್. ಠಾಕೂರ್ ಹಾಗೂ ಎ.ಕೆ. ಸಿಕ್ರಿ ಅವರ ಪೀಠ ಹೇಳಿತು.
ಮಾರ್ಚ್ 4ರಿಂದ ಸುಬ್ರತೊ ಇಲ್ಲಿನ ತಿಹಾರ್ ಜೈಲಿನಲ್ಲಿ ಬಂದಿಯಾಗಿದ್ದಾರೆ. ಹೂಡಿಕೆದಾರರಿಗೆ ₨ 5,000 ಕೋಟಿ ನಗದು ಪಾವತಿಸಬೇಕು. ಬಿಡುಗಡೆಗೆ ಪೂರ್ವ ಷರತ್ತಾಗಿ ₨ 5,000 ಕೋಟಿ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇಡಬೇಕು ಎಂದು ಸುಬ್ರತೊ ಅವರಿಗೆ ಈ ಮೊದಲು ಕೋರ್ಟ್ ತಾಕೀತು ಮಾಡಿತ್ತು.
9 ನಗರಗಳಲ್ಲಿರುವ ಸ್ಥಿರಾಸ್ತಿಗಳನ್ನು ಮಾರಾಟ ಮಾಡಲು ಕೂಡ ಸಹಾರಾ ಸಮೂಹಕ್ಕೆ ಅನುಮತಿ ನೀಡಲಾಗಿದೆ.
‘ಈ ಸ್ಥಿರಾಸ್ತಿಗಳನ್ನು ಮಾರ್ಗಸೂಚಿ ದರಕ್ಕಿಂತ (ಸರ್ಕಲ್ ರೇಟ್) ಕಮ್ಮಿಗೆ ಮಾರಾಟ ಮಾಡಬಾರದು. ಅದೂ ಅಲ್ಲದೇ ಖರೀದಿದಾರರು ಈ ಸಮೂಹಕ್ಕೆ ಸೇರಿದವರು ಅಥವಾ ಸುಬ್ರತೊ ರಾಯ್ ಬಂಧುಗಳಾಗಿರಬಾರದು’ ಎಂದು ಪೀಠ ತಿಳಿಸಿದೆ.
‘ಮಾರಾಟದಿಂದ ಬಂದ ಲಾಭಾಂಶವನ್ನು ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಡಬೇಕು ಮತ್ತು ಇದನ್ನು ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ನಿರ್ವಹಿಸಬೇಕು’ ಎಂದೂ ಕೋರ್ಟ್ ಹೇಳಿದೆ.
ನಿಶ್ಚಿತ ಠೇವಣಿ ಹಣ ಪಡೆಯುವುದಕ್ಕೆ ಹಾಗೂ ಕರಾರುಪತ್ರಕ್ಕೆ ಸಂಬಂಧಿಸಿ ದಂತೆ ಸಹಾರಾ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಪೀಠ ತೆರವು ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.