ದೆಹಲಿಯಿಂದ ಅಸ್ಸಾಂನ ದಿಬ್ರುಗಡಕ್ಕೆ ತೆರಳುತ್ತಿದ್ದ ರಾಜಧಾನಿ ಎಕ್ಸ್ಪ್ರೆಸ್ ರೈಲಿನ 12 ಬೋಗಿಗಳು ಬುಧವಾರ ಹಳಿತಪ್ಪಿದ ಕಾರಣ ನಾಲ್ವರು ಸತ್ತಿದ್ದಾರೆ. ಅದೇ ದಿನ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಸರಕು ಸಾಗಣೆ ರೈಲಿನ 18 ವ್ಯಾಗನ್ಗಳು ಹಳಿತಪ್ಪಿವೆ.
ಕಳೆದ ಒಂದು ತಿಂಗಳಲ್ಲಿ ರೈಲು ಅಪಘಾತ ಸಂಭವಿಸುತ್ತಿರುವುದು ಇದು ಎರಡನೇ ಬಾರಿ. ಮೇ 26ರಂದು ಗೋರಖ್ ಧಾಮ್ ಎಕ್ಸ್ಪ್ರೆಸ್ ರೈಲು ಅಪಘಾತದಲ್ಲಿ ಸುಮಾರು 25 ಜನ ಸತ್ತಿದ್ದರು. ಈಗ ಬಿಹಾರದಲ್ಲಿ ನಡೆದಿರುವ ಈ ಅಪಘಾತಗಳ ಹಿಂದೆ ನಕ್ಸಲೀಯರ ವಿಧ್ವಂಸಕ ಕೃತ್ಯದ ಶಂಕೆ ವ್ಯಕ್ತವಾಗಿದ್ದು ಅದು ತನಿಖೆಯಿಂದ ದೃಢಪಡಬೇಕಿದೆ. ಸರಕು ಸಾಗಣೆ ರೈಲು ಹಳಿ ತಪ್ಪಿದಾಗ ಸ್ಫೋಟ ಕೂಡ ಸಂಭವಿಸಿರುವುದು ಈ ಅನುಮಾನವನ್ನು ಹೆಚ್ಚಿಸಿದೆ. ಅಪಘಾತ ಸಂಭವಿಸಿದಾಗಲೆಲ್ಲ ಪರಿಹಾರದ ಘೋಷಣೆ, ಗಾಯಗೊಂಡವರಿಗೆ ಸಾಂತ್ವನ, ತನಿಖೆ ಇವೆಲ್ಲ ಮಾಮೂಲಿ ಕ್ರಮಗಳಾಗಿವೆ. ಆದರೆ ಅಪಘಾತಗಳನ್ನು ತಡೆಯಬೇಕಾದುದು ಮುಖ್ಯ. ಇದಕ್ಕಾಗಿ ಹೆಚ್ಚಿನ ಮುನ್ನೆಚ್ಚರಿಕೆಗಳು ಅಗತ್ಯ.
ನಕ್ಸಲೀಯರು ಸಕ್ರಿಯವಾಗಿರುವಂತಹ ಸ್ಥಳಗಳಲ್ಲಿ ರೈಲ್ವೆಯಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಬಲವಾದ ಭದ್ರತೆ ಅತ್ಯಗತ್ಯ. ಅತಿ ಗಣ್ಯ ವ್ಯಕ್ತಿ ರೈಲಿನಲ್ಲಿ ಪ್ರಯಾಣಿಸುವಾಗ ಮುಂಚಿತವಾಗಿ ಪೈಲಟ್ ಎಂಜಿನ್ ಓಡಿಸಿ ಹಳಿಗಳ ಸುರಕ್ಷತೆ ಪರೀಕ್ಷಿಸುವ ಕ್ರಮ ಇದೆ. ಈ ಘಟನೆಗೆ ಸಂಬಂಧಿಸಿದಂತೆ ಹೇಳುವುದಾದಲ್ಲಿ ರೈಲ್ವೆ ಆಸ್ತಿಪಾಸ್ತಿಗಳ ಮೇಲೆ ನಕ್ಸಲೀಯರು ದಾಳಿ ನಡೆಸುವ ಸಾಧ್ಯತೆ ಬಗ್ಗೆ ರೈಲ್ವೆ ಸಚಿವಾಲಯಕ್ಕೆ ಗುಪ್ತಚರ ಮಾಹಿತಿ ಇತ್ತು ಎನ್ನಲಾಗಿದೆ. ಹೀಗಾಗಿ ಪೈಲಟ್ ಎಂಜಿನ್ ಓಡಿಸಿ ಮುನ್ನೆಚ್ಚರಿಕೆ ವಹಿಸಬೇಕೆಂದು ಪೊಲೀಸ್ ಅಧಿಕಾರಿಯೊಬ್ಬರು ಆಗ್ರಹಪಡಿಸಿದ್ದರು. ಆದರೂ ಈ ಸಲಹೆಯನ್ನು ನಿರ್ಲಕ್ಷಿಸಿರುವುದು ಖಂಡನೀಯ.
ಹಳಿ ತಪ್ಪುವುದು, ಡಿಕ್ಕಿ, ಅಗ್ನಿ ಆಕಸ್ಮಿಕ ಅಥವಾ ಕಾವಲುಗಾರನಿಲ್ಲದ ಲೆವೆಲ್ ಕ್ರಾಸಿಂಗ್ ಬಳಿ ಆಕಸ್ಮಿಕ ಘಟನೆಗಳು ರೈಲು ಅಪಘಾತಗಳಿಗೆ ಸಾಮಾನ್ಯವಾಗಿ ಕಾರಣವಾಗುತ್ತವೆ. ಆದರೆ ಇಂತಹ ಅಪಘಾತಗಳಾಗದಂತೆ ಮುನ್ನೆಚ್ಚರಿಕೆಗಳನ್ನು ವಹಿಸುವುದು ಸಾಧ್ಯ. ಈ ಬಗ್ಗೆ ರೈಲ್ವೆ ಸಚಿವರು ತುರ್ತು ಪರಿಶೀಲನೆ ನಡೆಸುವುದು ಒಳ್ಳೆಯದು. ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ, ಕಟ್ಟುನಿಟ್ಟಿನ ಕ್ರಮಗಳಾಗಲಿ ಸತ್ತವರನ್ನು ವಾಪಸ್ ಕರೆತರಲಾಗದು ಎಂಬುದು ನೆನಪಿರಬೇಕು.
ರೈಲು ಪ್ರಯಾಣ ಸುರಕ್ಷಿತ ಎಂಬ ಭಾವನೆ ಜನರಲ್ಲಿ ತುರ್ತಾಗಿ ಮೂಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ದಿನನಿತ್ಯ ಅತಿ ಹೆಚ್ಚಿನ ಪ್ರಯಾಣಿಕರು ಭಾರತದಲ್ಲಿ ರೈಲುಗಳಲ್ಲೇ ಸಂಚರಿಸುತ್ತಾರೆ. ಭಾರತದಲ್ಲಿರುವ 64,000 ಕಿ.ಮೀ. ವ್ಯಾಪ್ತಿಯ ರೈಲ್ವೆ ಜಾಲದ ರಕ್ಷಣೆ ಕ್ಲಿಷ್ಟಕರ ಎಂಬುದು ನಿಜ. ಆದರೆ ರೈಲ್ವೆ ಪ್ರಯಾಣ ಸುರಕ್ಷತೆಗೆ ತಂತ್ರಜ್ಞಾನ ಸೇರಿದಂತೆ ಎಲ್ಲಾ ಬಗೆಯ ಕ್ರಮಗಳೂ ಬಳಕೆಯಾಗಬೇಕಾದುದು ಅತ್ಯವಶ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.