ನವದೆಹಲಿ(ಪಿಟಿಐ): ಕೇಂದ್ರ ಸಚಿವರಾದ ಬೀರೇಂದರ್ ಸಿಂಗ್ ಮತ್ತು ಸುರೇಶ್ ಪ್ರಭು ಅವರಿಗೆ ಹರಿಯಾಣದಿಂದ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ ಟಿಕೆಟ್ ನೀಡಿದೆ.
ಅಕ್ಟೋಬರ್ 27ರಂದು ಸಂಪುಟ ವಿಸ್ತರಣೆಯಾದಾಗ ಈ ಇಬ್ಬರೂ ಸಂಸತ್ತಿನ ಸದಸ್ಯರಾಗಿರಲಿಲ್ಲ. ಹರಿಯಾಣದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಆದ್ದರಿಂದ ಇಬ್ಬರಿಗೆ ಟಿಕೆಟ್ ನೀಡಿರುವುದಕ್ಕೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ರಾಜ್ಯಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿಲ್ಲದಿದ್ದರೂ ಇವರ ಆಯ್ಕೆಯಾದರೆ ಪಕ್ಷದ ಬಲ ಹೆಚ್ಚಲಿದೆ.
ಸದ್ಯ 43 ಬಿಜೆಪಿ ಸದಸ್ಯರು ರಾಜ್ಯಸಭೆಯಲ್ಲಿದ್ದಾರೆ. ಈ ಮೊದಲು ಬೀರೇಂದರ್ ಸಿಂಗ್ ಅವರು ರಾಜ್ಯಸಭೆಗೆ ಹರಿಯಾಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಆನಂತರ ಅವರು ಪಕ್ಷ ತ್ಯಜಿಸಿದ್ದರು.