ನವದೆಹಲಿ (ಪಿಟಿಐ): ಪಶ್ಚಿಮಘಟ್ಟದ ವ್ಯಾಪ್ತಿಯ ರಾಜ್ಯ ಸರ್ಕಾರಗಳು ಸಮೀಕ್ಷೆಯ ಬಳಿಕ ಅಲ್ಲಿನ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ (ಇಎಸ್ಎ)ಕೆಲವೊಂದು ಪ್ರದೇಶಗಳನ್ನು ಸೇರಿಸುವ ಅಥವಾ ಕೈಬಿಡುವ ಪ್ರಸ್ತಾವ ಮುಂದಿಡುವ ಸಾಧ್ಯತೆ ಇದೆ ಎಂದು ಪರಿಸರ ಹಾಗೂ ಅರಣ್ಯ ಖಾತೆ ಸಚಿವಾಲಯವು ಹಸಿರು ನ್ಯಾಯಮಂಡಳಿಗೆ ಸೋಮವಾರ ಮಾಹಿತಿ ನೀಡಿದೆ.
‘ಯಾವುದೇ ಕ್ರಮ ತೆಗೆದುಕೊಳ್ಳುವ ಮುಂಚೆ ಈ ಪ್ರಸ್ತಾವಗಳನ್ನು ಪರಿಶೀಲಿಸಲಾಗುತ್ತದೆ’ ಎಂದು ಹಸಿರು ನ್ಯಾಯಮಂಡಳಿ ಅಧ್ಯಕ್ಷ ನ್ಯಾ.ಸ್ವತಂತ್ರ ಕುಮಾರ್್ ನೇತೃತ್ವದ ಪೀಠದ ಮುಂದೆ ಸಚಿವಾಲಯದ ಕಾರ್ಯದರ್ಶಿ ಅಶೋಕ್್ ಲವಸಾ ಸಲ್ಲಿಸಿದ್ದ ಪ್ರಮಾಣಪತ್ರ-ದಲ್ಲಿ ಹೇಳಲಾಗಿದೆ.
ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಪರಿಸರ ಸಚಿವಾಲಯ ಪಶ್ಚಿಮಘಟ್ಟಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಸಂಬಂಧಿಸಿ ಮಾಧವ್ ಗಾಡ್ಗೀಳ್ ವರದಿ ಕೈಬಿಡುವುದಾಗಿ ತಿಳಿಸಿತ್ತು. ಕಸ್ತೂರಿ ರಂಗನ್ ವರದಿ ಬಗ್ಗೆಯೂ ಕೆಲವು ಅನುಮಾನಗಳು ಇವೆ. ಪಶ್ಚಿಮಘಟ್ಟಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲು ಸಮೀಕ್ಷೆ ನಡೆಸುವ ಉದ್ದೇಶವಿದೆ ಎಂದು ಹೇಳಿತ್ತು.
ಸೂಕ್ಷ್ಮವಲಯದ ರಕ್ಷಣಾ ವಿಷಯದ ತನ್ನ ನಿಲುವು ಬದಲಾಯಿಸಿದ್ದಕ್ಕಾಗಿ ಸಚಿವಾಲಯವನ್ನು ಸುಪ್ರೀಂಕೋರ್ಟ್್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.