ಬೆಂಗಳೂರು: ನಗರದಲ್ಲಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮಂಗಳವಾರ ಬಹುತೇಕ ಸೇವೆಗೆ ಹಾಜರಾಗಿದ್ದರಿಂದ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯಿತು.
ಕೆ.ಸಿ.ಜನರಲ್ ಆಸ್ಪತ್ರೆ, ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆ, ಶಿವಾಜಿ ನಗರದ ಗೌಸಿಯಾ ಆಸ್ಪತ್ರೆ, ಯಲಹಂಕ, ಆನೇಕಲ್ ಮತ್ತು ಕೆ.ಜಿ.ಹಳ್ಳಿಯ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಮತ್ತಿತರ ಆಸ್ಪತ್ರೆಗಳಲ್ಲಿ ವೈದ್ಯರು ಸೇವೆಗೆ ಹಾಜರಾಗಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ವಿಮಲಾ ಪಾಟೀಲ್, ‘ವೈದ್ಯರು ಸೇವೆಗೆ ಹಾಜರಾಗಿದ್ದರಿಂದ, ರೋಗಿಗಳಿಗೆ ಯಾವುದೇ ತೊಂದರೆಯಾಗಿಲ್ಲ’ ಎಂದರು.
ಸೋಮವಾರ ಸಾಮೂಹಿಕ ರಾಜೀನಾಮೆ ನೀಡಿರುವ ಸರ್ಕಾರಿ ವೈದ್ಯರು ಒಂದು ತಿಂಗಳ ಕಾಲ ಸೇವೆ ಸಲ್ಲಿಸಲಿದ್ದಾರೆ.