ಬೆಂಗಳೂರು: ನಗರದಲ್ಲಿರುವ ಪಯೋನಿಯರ್ ಸೇನಾ ತರಬೇತಿ ಕೇಂದ್ರದಲ್ಲಿ ತರಬೇತಿ ಪೂರೈಸಿದ 53 ಸೈನಿಕರ ಪಥಸಂಚಲನ ಸೋಮವಾರ ನಡೆಯಿತು.
ಸಮಾರಂಭದಲ್ಲಿ ತರಬೇತಿ ಕೇಂದ್ರದ ಉಪ ಪ್ರಧಾನ ನಿರ್ದೇಶಕ ಬ್ರಿಗೇಡಿಯರ್ ಎಸ್.ಕೆ.ಆಚಾರ್ಯ ಮಾತನಾಡಿ, ‘ಮೊದಲ ಮತ್ತು ಎರಡನೇ ಮಹಾಯುದ್ಧ, ಪಾಕಿಸ್ತಾನ ಹಾಗೂ ಚೀನಾ ದೇಶಗಳೊಂದಿಗಿನ ಯುದ್ಧಗಳಲ್ಲಿ ಭಾಗವಹಿಸುವ ಮೂಲಕ ದೇಶದ ಸೈನಿಕರು ಹೆಮ್ಮೆಯ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಹಿರಿಯರು ನಡೆದ ಹಾದಿಯಲ್ಲಿಯೇ ಹೊಸದಾಗಿ ತರಬೇತಿ ಪೂರೈಸಿದ ಕಿರಿಯರು ಉತ್ತಮ ಸೇವೆ ಸಲ್ಲಿಸುತ್ತಾರೆ ಎನ್ನುವ ನಂಬಿಕೆ ನನಗಿದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಆಚಾರ್ಯ ಅವರು ವಿಜೇತರಿಗೆ ಪ್ರಶಸ್ತಿಗಳನ್ನು ಮತ್ತು ಸೈನಿಕರ ಪಾಲಕರಿಗೆ ಗೌರವ ಪದಕಗಳನ್ನು ಪ್ರದಾನ ಮಾಡಿದರು.