ಬೆಂಗಳೂರು: ‘ಎರಡು ವಿಮಾನಗಳು ಕೆಳಗಿಳಿಯಲು ಸಿದ್ಧವಾಗಿವೆ ಎಂದಿಟ್ಟುಕೊಳ್ಳಿ. ನಿಲ್ದಾಣದಲ್ಲಿ ವಿಮಾನದ ಮಾರ್ಗವನ್ನು ನಿಯಂತ್ರಿಸುವ ಅಧಿಕಾರಿಗಳನ್ನೇ ತಮ್ಮ ಚಾಕಚಕ್ಯತೆ ಮೂಲಕ ಗೊಂದಲಕ್ಕೆ ಒಳಪಡಿಸಿ ಅಪಘಾತಕ್ಕೆ ಕಾರಣವಾಗುವ ಸೈಬರ್ ವಂಚಕರು (ಹ್ಯಾಕರ್ಸ್) ಈ ಜಗತ್ತಿನಲ್ಲಿದ್ದಾರೆ. ಇದರಿಂದ ಭಾರಿ ಸಾವು ನೋವು ಸಂಭವಿಸುವ ಸಾಧ್ಯತೆ ಇರುತ್ತದೆ’
‘ಭಾರತದ ಒಂದು ಭಾಗವನ್ನು ಪಾಕಿಸ್ತಾನದ ಸೇನೆ ಆಕ್ರಮಿಸಿಕೊಂಡಿದೆ ಎಂದು ಎಲ್ಲರಿಗೆ ಇಮೇಲ್ ಬರುತ್ತದೆ ಎಂದಿಟ್ಟುಕೊಳ್ಳಿ. ಆಗ ಜನ ದಂಗೆ ಏಳಬಹುದು. ನಂತರದ ಪರಿಣಾಮವನ್ನು ನೀವೇ ಊಹಿಸಿ’
–ಈ ರೀತಿಯ ಉದಾಹರಣೆ ಮೂಲಕ ಸೈಬರ್ ಅಪರಾಧದ ಕರಾಳ ಮುಖವನ್ನು ತೆರೆದಿಟ್ಟಿದ್ದು ಫ್ಲಾರಿಡಾ ಅಂತರರಾಷ್ಟ್ರೀಯ ವಿ.ವಿ ಪ್ರಾಧ್ಯಾಪಕ ಡಾ. ಎಸ್.ಸೀತಾರಾಮ್ ಅಯ್ಯಂಗಾರ್.
‘ಬೆಂಗಳೂರು ವಿಜ್ಞಾನ ವೇದಿಕೆ’ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಸೈಬರ್ ಭದ್ರತೆ ಸುರಕ್ಷಿತವೇ?’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
‘ಸೈಬರ್ ಅಪರಾಧ ಈಗ ಸೈಬರ್ ಯುದ್ಧಕ್ಕೆ ಕಾರಣವಾಗುವ ಆತಂಕ ಸೃಷ್ಟಿಸಿದೆ. ಇನ್ನು ದೇಶಗಳ ನಡುವೆ ಸಾಂಪ್ರದಾಯಿಕ ಯುದ್ಧ ನಡೆಯುವುದಿಲ್ಲ. ಬದಲಾಗಿ ಸೈಬರ್ ಯುದ್ಧ ಜರುಗುವ ಸಾಧ್ಯತೆಗಳಿವೆ’ ಎಂದು ಆತಂಕ ವ್ಯಕ್ತಪಡಿಸಿದರು.
ವಿಜ್ಞಾನಿಗಳು, ಪ್ರೊಫೆಸರ್ಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳು ಆತಂಕಭರಿತ ಧ್ವನಿಯಲ್ಲಿಯೇ ಪ್ರಶ್ನೆಗಳ ಮೂಲಕ ತಮ್ಮ ಅನುಮಾನ ಬಗೆಹರಿಸಿ ಕೊಳ್ಳಲು ಪ್ರಯತ್ನಿಸಿದರು. ಪವರ್ ಪಾಯಿಂಟ್ ನೆರವಿನಿಂದ ಅವರು ಉದಾಹರಣೆ, ಚಿತ್ರ ಹಾಗೂ ಗ್ರಾಫಿಕ್ಸ್ ಮೂಲಕ ಅಯ್ಯಂಗಾರ್, ತಮ್ಮ ಅನುಭವದ ಬುತ್ತಿಯನ್ನು ಸಭಿಕರಿಗೆ ಉಣಬಡಿಸಿದರು.
ವೆಬ್ ಪೇಜ್ಗೇ ಕನ್ನ: ‘ನಾನು ಇತ್ತೀಚೆಗಷ್ಟೇ ‘ಮ್ಯಾಥಮೆಟಿಕ್ಸ್ ಥಿಯರಿ’ ಎಂಬ ಪುಸ್ತಕ ಬರೆದಿದ್ದೇನೆ. ಅದು ವೆಬ್ಪೇಜ್ನಲ್ಲೂ ಲಭ್ಯವಿದೆ. ಆದರೆ ಈ ವಂಚಕರು ಆ ವೆಬ್ಪೇಜ್ಗೆ ಕನ್ನ ಹಾಕಿ ಪುಸ್ತಕ ಬರೆದವರ ಹೆಸರನ್ನೇ ಬದಲಾಯಿಸಿದ್ದಾರೆ’ ಎಂದಾಗ ಸಭಾಂಗಣದಲ್ಲಿ ಜೋರು ನಗು.
‘ಆನ್ಲೈನ್ ಬ್ಯಾಂಕಿಂಗ್ ಮೂಲಕ ಹಣಕಾಸು ವ್ಯವಹಾರದಲ್ಲಿ ತೊಡಗಿರುವವರು ಈ ಸೈಬರ್ ಕಳ್ಳರ ವಂಚನೆಗೆ ಒಳಗಾಗುತ್ತಿದ್ದಾರೆ. ಕೋಟ್ಯಂತರ ಹಣ ಕಳೆದುಕೊಂಡ ಉದಾಹರಣೆಗಳಿವೆ. ಷೇರುಪೇಟೆಯ ಕೆಲ ಮಾಹಿತಿಯನ್ನು ಮೊದಲೇ ಕಲೆಹಾಕಿ ಮಾರುಕಟ್ಟೆಯ ಏರುಪೇರಿಗೆ ಕಾರಣರಾಗುತ್ತಿದ್ದಾರೆ’ ಎಂದು ಹೇಳಿದರು.
‘ಬ್ಯಾಂಕ್ಗಳು ಮಾತ್ರವಲ್ಲ; ಸೈಬರ್ ಕಳ್ಳರಿಂದಾಗಿ ದೇಶದ ರಕ್ಷಣಾ, ಇಂಧನ ಹಾಗೂ ದೂರಸಂಪರಕ ವ್ಯವಸ್ಥೆ ಭಾರಿ ಅಪಾಯಕ್ಕೆ ಸಿಲುಕಿವೆ. ತಪ್ಪು ಮಾಹಿತಿ ನೀಡುವ ಮೂಲಕ ಜನರ ದಿಕ್ಕುತಪ್ಪಿಸುತ್ತಿದ್ದಾರೆ. ಆನ್ಲೈನ್ ವ್ಯವಸ್ಥೆಯನ್ನೇ ಹಾಳುಗೆಡುವುತ್ತಿದ್ದಾರೆ.
ರಹಸ್ಯ ಹಾಗೂ ಪ್ರಮುಖ ಯೋಜನೆಯ ಅಂಶಗಳನ್ನು ಕದಿಯುತ್ತಿದ್ದಾರೆ. ದತ್ತಾಂಶಗಳನ್ನು ನಾಶಪಡಿಸುತ್ತಿದ್ದಾರೆ. ಇರಾನ್ ಅಣ್ವಸ್ತ್ರ ಯೋಜನೆಯ ಪ್ರಮುಖ ಮಾಹಿತಿಯನ್ನೇ ಹಾಳುಗೆಡುವಿದ್ದರು. ಪದವಿ ಕೂಡ ಓದದವರು ಇಂಥ ಕೃತ್ಯ ಎಸಗುವ ಕೌಶಲ ಹೊಂದಿದ್ದಾರೆ’ ಎಂದು ಅವರು ವಿವರಿಸಿದರು.
‘ಸೈಬರ್ ಕಳ್ಳರ ಬಗ್ಗೆ ಅಮೆರಿಕ ಕೂಡ ಭಯಭೀತವಾಗಿದೆ. ಸೈಬರ್ ಭದ್ರತೆಗಾಗಿ ಸಾವಿರಾರು ಕೋಟಿ ಹಣ ವ್ಯಯಿಸುತ್ತಿದೆ. ಸೈಬರ್ ಕಳ್ಳರನ್ನು ನಿಯಂತ್ರಿಸಲು ಸಂಶೋಧನೆಗಳು, ಅಧ್ಯಯನದ ಮೂಲಕ ಹೊಸ ಮಾರ್ಗ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಭಾರತದಲ್ಲೂ ಹೆಚ್ಚಿನ ಸಂಶೋಧನೆ ನಡೆಯಬೇಕು. ವಿವಿಗಳಲ್ಲಿ ಸೈಬರ್ ಭದ್ರತೆಗೆ ಸಂಬಂಧಿಸಿದ ಹೊಸ ಕೋರ್ಸ್ಗೆ ಅವಕಾಶ ಕಲ್ಪಿಸಬೇಕು. ಪಠ್ಯದಲ್ಲಿ ಬದಲಾವಣೆ ಮಾಡಬೇಕು. ಅದಕ್ಕಾಗಿ ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸಬೇಕು’ ಎಂದು ಅಯ್ಯಂಗಾರ್ ಪ್ರತಿಪಾದಿಸಿದರು.
‘ರಹಸ್ಯ ಮಾಹಿತಿಗಳನ್ನು ನಮಗೆ ಅರ್ಥವಾಗುವ ಕೋಡ್ಗಳಲ್ಲಿ ಮತ್ತೊಬ್ಬರಿಗೆ ರವಾನಿಸಿ ಈ ಕೃತ್ಯಕ್ಕೆ ಕಡಿವಾಣ ಹಾಕಬಹುದು. ಅನುಮಾನ ಬಂದಾಗ ಕೂಡಲೇ ಜಾಗೃತರಾಗಿ ಮಾಹಿತಿ ಬದಲಾಯಿಸಬೇಕು. ಸೈಬರ್ ಕಳ್ಳರನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಆದರೆ ಸುಖಾಸುಮ್ಮನೇ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.