ಮತ್ತೋಡು, ಶ್ರೀರಾಂಪುರ, ಮಾಡದ ಕೆರೆ ಹಾಗೂ ಕಸಬಾ ಹೋಬಳಿ ಯಾದ್ಯಂತ ಸಾಂಕ್ರಾಮಿಕ ರೋಗ ನಿಯಂತ್ರಣದ ಅರಿವಿನ ಜಾಥಾ ಕಾರ್ಯಕ್ರಮ ನಡೆಸಲಾಗಿದೆ. ಜತೆಗೆ ಮತ್ತೋಡು ಹೋಬಳಿಯ ಹಲವು ಗ್ರಾಮಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಮನೆಯ ಗೋಡೆಗಳಿಗೆ ಕ್ರಿಮಿನಾಷಕ ಸಿಂಪಡಣೆ ಹಾಗೂ ಫಾಗಿಂಗ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಕಲುಷಿತ ವಾತಾವರಣ ಹಾಗೂ ಸೊಳ್ಳೆಗಳ ಹಾವಳಿಯಿಂದ ಸಾಂಕ್ರಾಮಿಕ ರೋಗಗಳ ಹರಡುವ ಆತಂಕವಿದೆ. ಆರೋಗ್ಯ ಇಲಾಖೆ ಸೊಳ್ಳೆಗಳ ನಿಯಂತ್ರಣಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು, ಮಲೇರಿಯಾ, ಡೆಂಗೆ, ಮಿದುಳು ಜ್ವರ, ಸೇರಿದಂತೆ ಹಲವು ರೋಗಗಳ ಹರಡುವಿಕೆ ತಪ್ಪಿಸಲು ಸಾಧ್ಯ. ಈ ರೀತಿಯ ಕ್ರಮವನ್ನು ಎಲ್ಲೆಡೆ ಅನುಷ್ಠಾನಗೊಳಿಸಬೇಕು ಎಂಬುದು ಮತ್ತೋಡು ಹೋಬಳಿ ನಾಗರಿಕರ ಮನವಿಯಾಗಿದೆ.
ಪ್ರತಿಯೊಬ್ಬರು ತಮ್ಮ ಮನೆಯ ಸತ್ತಮುತ್ತಲಿನ ಪರಿಸರ ಹಾಗೂ ನೀರಿನ ಸಂಗ್ರಹ ಸಾಮಗ್ರಿಗಳನ್ನು ಶುಚಿಯಾಗಿ ಇಡಬೇಕು. ಇದರಿಂದ ಸೊಳ್ಳೆಗಳು ನಿಯಂತ್ರಣವಾಗಿ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಘವೇಂದ್ರ ಪ್ರಸಾದ್.