ಕೂಡಲಸಂಗಮದಲ್ಲಿ ‘ಬಸವ ಅಂತರರಾಷ್ಟ್ರೀಯ ಕೇಂದ್ರ’ ಸ್ಥಾಪಿಸುವ ಇರಾದೆಯನ್ನು ಮುಖ್ಯಮಂತ್ರಿಗಳು ಬಜೆಟ್ ಭಾಷಣದಲ್ಲಿ ತೋಡಿಕೊಂಡಿದ್ದಾರೆ. ಸಂತೋಷ. ಆದರೆ ಇದೇ 18 ರಂದು ನಾನು ಕೂಡಲಸಂಗಮಕ್ಕೆ ಹೋಗಿದ್ದೆ. ಅಲ್ಲಿಯ ವ್ಯವಸ್ಥೆ ಕಂಡು ಅಸಂತೋಷವಾಯಿತು. ದಾಸೋಹ ಭವನಕ್ಕೆ ಹೋದರೆ ಅಂದು ದಾಸೋಹ ಇದ್ದಿರಲಿಲ್ಲ. ಎಷ್ಟೋ ಸಂದರ್ಶಕರು ನಿರಾಶೆಯಿಂದ ಹಿಂದಕ್ಕೆ ತೆರಳಿದರು.
ಅಲ್ಲಿ ಕೇಳಲಾಗಿ, ಈ ರೀತಿ ಪದೇ ಪದೇ ನಡೆಯುತ್ತದೆ ಎಂದರು. ಐಕ್ಯ ಮಂಟಪವನ್ನು ಸ್ವಚ್ಛಗೊಳಿಸಿರಲಿಲ್ಲ. ದೇಶದ ಎಲ್ಲೆಡೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ಕೂಡಲಸಂಗಮದಲ್ಲಿ ಅದರ ಬಗ್ಗೆ ಗಮನಹರಿಸಿದಂತೆ ಕಾಣಲಿಲ್ಲ. ಶೌಚಾಲಯ ದೂರದಲ್ಲಿ ಎಲ್ಲೋ ಇದೆ. ತುಂಬಾ ಅವ್ಯವಸ್ಥೆಯಿಂದ ಕೂಡಿದೆ. ನೀರಿನ ವ್ಯವಸ್ಥೆ ಸರಿಯಾಗಿ ಇಲ್ಲ. ಇಂಥ ಮೂಲ ಸೌಕರ್ಯಗಳ ಬಗ್ಗೆ ಪ್ರಾಧಿಕಾರ ಗಮನ ಹರಿಸುವುದು ಅತ್ಯಗತ್ಯ. ಬಸವಣ್ಣನ ಹೆಸರಿಗೆ ಕಪ್ಪುಚುಕ್ಕೆ ಇಡುವ ಯಾವುದೇ ಪ್ರಯತ್ನ ಆಗಬಾರದಲ್ಲವೇ?