ಸೌದಿಯ ರಿಯಾದ್ನಲ್ಲಿ ಮನೆ ಕೆಲಸಕ್ಕಿದ್ದ ತಮಿಳುನಾಡಿನ ವೆಲ್ಲೂರು ಮೂಲದ ಕಸ್ತೂರಿ ಮುನಿರತ್ನಂ (55) ಎಂಬ ಮಹಿಳೆಗೆ ಕಿರುಕುಳ ನೀಡಿ ಆಕೆಯ ಕೈಯನ್ನು ಮನೆ ಮಾಲೀಕ ಕತ್ತರಿಸಿದ್ದರು. ಈ ವಿಡಿಯೊ ದೃಶ್ಯ ಗುರುವಾರ ರಾತ್ರಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿ ಭಾರಿ ವಿವಾದ ಸೃಷ್ಟಿಸಿತ್ತು. ಕಸ್ತೂರಿಯನ್ನು ಭಾರತಕ್ಕೆ ಕರೆತರಲು ರಾಯಭಾರಿ ಕಚೇರಿ ಮೇಲೆ ಒತ್ತಡ ಹೇರಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್, ಈ ಪೈಶಾಚಿಕ ಕೃತ್ಯವನ್ನು ಒಪ್ಪಲು ಸಾಧ್ಯವಿಲ್ಲ. ಸೌದಿ ಅಧಿಕಾರಿಗಳ ಜತೆ ಈ ಕುರಿತು ಮಾತನಾಡಿದ್ದೇನೆ. ಭಾರತೀಯ ರಾಯಭಾರಿ ಅಧಿಕಾರಿಗಳು ಸಂತ್ರಸ್ಥ ಮಹಿಳೆಯ ಜತೆ ನಿರಂತರ ಸಂಪರ್ಕದಲ್ಲಿದ್ದು, ಆಕೆಯನ್ನು ಸ್ವದೇಶಕ್ಕೆ ಕರೆತರಲು ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.
ಮನೆ ಕೆಲಸದಾಕೆಯ ಕೈ ಕತ್ತರಿಸಿದ ಮಾಲೀಕನ ವಿರುದ್ಧ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸುವಂತೆ ಸೌದಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಸ್ತೂರಿಗೆ ಎಲ್ಲ ರೀತಿಯ ರಾಜತಾಂತ್ರಿಕ ನೆರವು ನೀಡಲು ಸೂಚಿಸಲಾಗಿದೆ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.
ಸದ್ಯ ಕಸ್ತೂರಿ ಸೌದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.