ಬರ್ದ್ವಾನ್ (ಪಶ್ಚಿಮ ಬಂಗಾಳ) (ಪಿಟಿಐ): ಅಕ್ಟೋಬರ್ 2ರಂದು ಇಲ್ಲಿ ನಡೆದಿದ್ದ ಸ್ಫೋಟ ಪ್ರಕರಣದ ತನಿಖೆಯ ಪ್ರಗತಿ ಪರಿಶೀಲಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರೂ ಸೇರಿದಂತೆ ರಾಷ್ಟ್ರದ ಉನ್ನತ ಭದ್ರತಾ ಮತ್ತು ತನಿಖಾ ಸಂಸ್ಥೆಗಳ ಮುಖ್ಯಸ್ಥರು ಸ್ಫೋಟ ನಡೆದಿದ್ದ ಸ್ಥಳಕ್ಕೆ ಭೇಟಿ ನೀಡಿದರು.
ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾ ನಿರ್ದೇಶಕ ಶರದ್ ಕುಮಾರ್, ಎನ್ಎಸ್ಜಿ ಮಹಾ ನಿರ್ದೇಶಕ ಜಯಂತ್ ನಾರಾಯಣ್ ಚೌಧರಿ ಮತ್ತು ಗುಪ್ತಚರ ದಳದ (ಇಂಟೆಲಿಜೆನ್ಸ್ ಬ್ಯೂರೊ) ನಿರ್ದೇಶಕ ಸೈಯದ್ ಆಸಿಫ್ ಇಬ್ರಾಹಿಂ ಅವರು ಡೊಭಾಲ್ ಅವರೊಂದಿಗಿದ್ದರು.
ಘಟನೆಯಲ್ಲಿ ಇಬ್ಬರು ಶಂಕಿತ ಉಗ್ರರು ಮೃತಪಟ್ಟಿದ್ದರು. ಅವರೊಂದಿಗೆ ಮನೆಯಲ್ಲಿ ವಾಸವಾಗಿದ್ದ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ಸ್ಫೋಟದ ನಂತರ ವಶಕ್ಕೆ ಪಡೆಯಲಾಗಿತ್ತು.
ಸ್ಥಳ ಪರಿಶೀಲನೆಯ ನಂತರ ನಾಲ್ವರು ಅಧಿಕಾರಿಗಳು, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ತನಿಖೆಯ ಪ್ರಗತಿ ಕುರಿತು ಮಾತನಾಡಿದರು. ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಲು ಕೋಲ್ಕತ್ತಾಗೆ ತೆರಳಿದರು ಎಂದು ಪೊಲೀಸರು ತಿಳಿಸಿದ್ದಾರೆ.