‘ಡಾ. ಅನಂತಮೂರ್ತಿಯವರಂತೆ ನಾನೂ ಸಮಾಜವಾದಿ ಚಿಂತನೆಯ ಪ್ರಭಾವಕ್ಕೆ ಒಳಗಾಗಿದ್ದೇನೆ’ ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು. (ಪ್ರ.ವಾ. ಆ. 23)
ಅನಂತಮೂರ್ತಿಯವರು ಟಿ.ವಿ. ಸಂದರ್ಶನವೊಂದರಲ್ಲಿ ‘ಶ್ರಮದಲ್ಲಿ ನಂಬಿಕೆ ಇರುವ ಬಡವರಿಗೆ ಈ ರೀತಿ ಕೊಡುಗೆಗಳನ್ನು ನೀಡುವ ಬದಲು ಅವಕಾಶಗಳನ್ನು ಕಲ್ಪಿಸಬೇಕಾಗಿತ್ತು’ ಎಂದಿರುವುದು ಅವರ ಗಮನಕ್ಕೆ ಬಂದಿದೆಯೆ? ಮೂಲ ರೂಪದ ಸಮಾಜವಾದ ‘ಉತ್ಪಾದನೆಗಳನ್ನು ರಾಜ್ಯ ವ್ಯವಸ್ಥೆ ಹಂಚಬೇಕು. ಮಕ್ಕಳಿಗೆ ಉಚಿತವಾಗಿ ಆಹಾರ ಮತ್ತು ಶಿಕ್ಷಣ ಕೊಡಬೇಕು’ ಎಂದಿತ್ತು.
ಕಾಂಗ್ರೆಸ್ ಸೋಷಲಿಸ್ಟ್ ಪಕ್ಷ ಸ್ಥಾಪಿಸಿದ್ದ ಕೆಲವರು ಕಾಂಗ್ರೆಸ್ಸಿನಿಂದ ಬೇರ್ಪಟ್ಟಿದ್ದಲ್ಲದೆ ಮುಂದೆ ನೆಹರೂ, ಇಂದಿರಾ ಗಾಂಧಿ ನೀತಿಗಳನ್ನು ವಿರೋಧಿಸಿದ್ದೂ ಚಾರಿತ್ರಿಕ ಸತ್ಯ. ಅದೆಲ್ಲ ಇರಲಿ, ‘ಅನ್ಯಭಾಗ್ಯ’ಕ್ಕೆ ಬರೋಣ. ನುಚ್ಚು ಅಕ್ಕಿಯನ್ನು, ಹುಳು ಹಿಡಿದುದನ್ನು ಮತ್ತು ಅದು ಪತ್ತೆಯಾಗಿ ಹೊಗೆ ಹಾಕಿಸಿಕೊಂಡು ವಿತರಣೆಯಾಗುವ ಅಕ್ಕಿಯನ್ನು ಪಡೆಯುವವರು ಭಾಗ್ಯವಂತರೆ?
ನ್ಯಾಯಾಲಯಕ್ಕೆ ಹೋದ ಪ್ರಕರಣ ದೀರ್ಘಕಾಲ ತೆಗೆದುಕೊಳ್ಳಬಹುದು. ಆದರೆ ಇಲಾಖಾ ವಿಚಾರಣೆಯನ್ನು ತ್ವರಿತವಾಗಿ ಮಾಡಬಹುದಲ್ಲ? ದಾಸ್ತಾನು ಬೇರೆಡೆ ಹೋದ, ಕಾರ್ಡುಗಳನ್ನು ಅರ್ಹರಲ್ಲದವರಿಗೆ ನೀಡಿದ, ಶೇಖರಣೆಯಲ್ಲಿ ಅಜಾಗರೂಕತೆ ತೋರಿದ ಎಷ್ಟು ಕೇಸುಗಳಲ್ಲಿ ರಾಜ್ಯ ಸರ್ಕಾರ ತೀವ್ರ ಕ್ರಮ ಕೈಗೊಂಡಿದೆ?
ಜೆ.ಎಚ್. ಪಟೇಲರು, ಒಮ್ಮೆ ‘ಈಗ ಯಾರೂ ಸಮಾಜವಾದಿಗಳಿಲ್ಲ, ಮಜಾವಾದಿಗಳಿರಬಹುದು’ ಎಂದಿದ್ದರು. ಆಡಳಿತಯಂತ್ರ ಸರಿ ಇಲ್ಲದಿದ್ದರೆ ಬಡವರ ಪರ ಎಂದು ಹೇಳಿಕೊಳ್ಳುವ ಇಂತಹ ಯೋಜನೆಗಳು ಕೆಲವರ ಮಜಾಕ್ಕೆ ಅನುವು ಮಾಡಿಕೊಡಬಹುದಷ್ಟೆ. ಅನಂತಮೂರ್ತಿಯವರಿಗೆ ಸ್ಮಾರಕ ನಿರ್ಮಿಸುವ ಬದಲು ಮೊದಲು ಅವರ ಮಾತುಗಳ ಸ್ಮರಣೆಯನ್ನು ಆಳಗೊಳಿಸಿಕೊಳ್ಳುವುದು ಅಗತ್ಯ.