ಬೆಂಗಳೂರು: ಅತಿಕ್ರಮಣಕ್ಕೆ ಒಳಗಾಗಿರುವ ನಗರದ 36 ಕೆರೆಗಳ ಸಮೀಕ್ಷೆ ನಡೆಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಕೇಳಿಕೊಂಡಿದ್ದು, ಸದಾಶಿವನಗರದ ಸ್ಯಾಂಕಿ ಕೆರೆ ಸಹ ಒತ್ತುವರಿ ಸಮಸ್ಯೆಯಿಂದ ಹೊರತಾಗಿಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಬಿಬಿಎಂಪಿ ಕೆರೆ ವಿಭಾಗದಿಂದ ಆ. 25ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಒತ್ತುವರಿಗೆ ಒಳಗಾದ 36 ಕೆರೆಗಳ ಸಮೀಕ್ಷೆ ನಡೆಸಲು ಕೋರಲಾಗಿದೆ. ಕೆರೆಗಳ ಸರಹದ್ದು ಗುರುತಿಸುವ ಜತೆಗೆ ಒತ್ತುವರಿ ತೆರವುಗೊಳಿಸಲು ನೆರವು ನೀಡಬೇಕು ಎಂಬ ಮನವಿಯನ್ನೂ ಮಾಡಲಾಗಿದೆ.
ಬಿಬಿಎಂಪಿ ಸುಪರ್ದಿಯಲ್ಲಿ 63 ಕೆರೆಗಳಿವೆ. ಅದರಲ್ಲಿ ಹತ್ತು ಕೆರೆಗಳು ಸಂಪೂರ್ಣವಾಗಿ ಅತಿಕ್ರಮಣಗೊಂಡಿವೆ. ಕಾಗದದಲ್ಲಿ ಮಾತ್ರ ಅವುಗಳ ದಾಖಲೆ ಇದ್ದು, ಭೌತಿಕ ಅಸ್ತಿತ್ವವನ್ನು ಸಂಪೂರ್ಣವಾಗಿ ಕಳೆದುಕೊಂಡಿವೆ. 35 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಸ್ಯಾಂಕಿ ಕೆರೆ ಸಹ ಒತ್ತುವರಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಯಾಂಕಿ ಕೆರೆಯ 1 ಎಕರೆ, 6 ಗುಂಟೆ ಪ್ರದೇಶವನ್ನು ಅತಿಕ್ರಮಿಸಲಾಗಿದೆ ಎಂದು ದಾಖಲೆಗಳೇ ಹೇಳುತ್ತಿವೆ.
ಕೌದೇನಹಳ್ಳಿ ಕೆರೆಯ 32 ಎಕರೆ, ಕೆಂಪಾಂಬುಧಿ ಕೆರೆಯ 4 ಎಕರೆ, ಹಲಗೆ ವಡೇರಹಳ್ಳಿ ಕೆರೆಯ 6 ಎಕರೆ, 9 ಗುಂಟೆ ಪ್ರದೇಶವನ್ನೂ ಅತಿಕ್ರಮಿಸಲಾಗಿದೆ.
ಚಿಕ್ಕ ಕಲ್ಲಸಂದ್ರ, ಇಟ್ಟಮಡು, ಬ್ಯಾಟಗುಂಟೆ ಪಾಳ್ಯ, ಲಿಂಗರಾಜಪುರ, ಕೋನೇನ ಅಗ್ರಹಾರ, ಗೆದ್ದಲಹಳ್ಳಿ, ವಿಜಿನಾಪುರ, ಬಸಾಪುರ, ಶ್ರೀನಿವಾಗಿಲು ಮತ್ತು ಬಿನ್ನಮಂಗಲ ಕೆರೆಗಳು ಈಗಾಗಲೇ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ ಎಂಬ ಮಾಹಿತಿಯೂ ಪತ್ರದಲ್ಲಿದೆ.
ಈ ಬಗೆಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್, ‘ಕೆರೆಗಳ ಒತ್ತುವರಿ ಕುರಿತಂತೆ ಸಂಪೂರ್ಣ ಅರಿವಿದ್ದು, ಕೆರೆಗಳೂ ಸೇರಿದಂತೆ ಸಾರ್ವಜನಿಕ ಪ್ರದೇಶಗಳ ಒತ್ತುವರಿ ತೆರವುಗೊಳಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ’ ಎಂದು ಹೇಳಿದರು.