ಧಾರವಾಡ: ಯಾವ ರಾಜಕೀಯದ ಹಿನ್ನೆಲೆಯೂ ಇಲ್ಲದೆ, ಪರಿಶ್ರಮ ಹಾಗೂ ಅದಮ್ಯ ಸಾಹಸ, ಪ್ರಯತ್ನಗಳ ಮೂಲಕ ಉತ್ತುಂಗ ಶಿಖರಕ್ಕೇರಿದವರು ಡಾ. ಸರೋಜಿನಿ ಮಹಿಷಿ. ಸಾಕಷ್ಟು ಓದಿಕೊಂಡಿದ್ದರು, ಉತ್ತಮ ವಾಗ್ಮಿ, ಅಸಾಮಾನ್ಯ ಮೇಧಾವಿ ಹಾಗೂ ಎಲ್ಲಿಲ್ಲದ ಚುರುಕು ತನದಿಂದ ಹಲವು ಚಟುವಟಿಕೆಗಳನ್ನು ಏಕಕಾಲಕ್ಕೆ ನಿಭಾಯಿಸಬಲ್ಲವರಾಗಿದ್ದರು ಎನ್ನುವುದು ಉತ್ಪ್ರೇಕ್ಷೆ ಎನಿಸಿದರೂ ಸತ್ಯ.
ಬಡ ಕುಟುಂಬದಿಂದ ಬಂದಿದ್ದ ಸರೋಜಿನಿ ಅವರು 1947ರಲ್ಲಿ ಬಿ.ಎ ಮುಗಿಸಿ ಸಾಂಗ್ಲಿಯ ವೆಲ್ಲಿಂಗ್ಟನ್ ಕಾಲೇಜಿಗೆ ಪದವಿ ತರಗತಿಗೆ ಬೋಧನೆ ಮಾಡಲು ಬರುತ್ತಿದ್ದರು. ಆಗ ನಾನು ಅವರ ವಿದ್ಯಾರ್ಥಿ.
ಬೆಳಗಾವಿಯಲ್ಲಿ ಕಾನೂನು ಪದವಿ ಮಾಡಿದ್ದರು. ಹೆಸರಿಗೆ ಮಾತ್ರ ವಕೀಲೆಯಾಗಿದ್ದ ಅವರು ಸಮಾಜ ಸೇವೆಯಲ್ಲೇ ಹೆಚ್ಚು ತೊಡಗಿಸಿಕೊಂಡಿದ್ದರು. ಉತ್ತಮ ವಾಗ್ಮಿಯಾಗಿದ್ದ ಇವರಿಗೆ 1966ರ ಸಂದರ್ಭದಲ್ಲಿ ಧಾರವಾಡಕ್ಕೆ ಭೇಟಿ ನೀಡಿದ್ದ ಇಂದಿರಾ ಗಾಂಧಿ ಅವರ ಪರಿಚಯವಾಯಿತು. ಇವರ ಚುರುಕುತನವನ್ನು ಮೆಚ್ಚಿದ ಇಂದಿರಾ ಗಾಂಧಿ ಅವರು ಸರೋಜಿನಿ ಅವರನ್ನು ದೆಹಲಿಗೆ ಕರೆಯಿಸಿಕೊಂಡರು.
ಇಂದಿರಾ ಗಾಂಧಿ ಅವರ ಅಲೆ ಇದ್ದ ಆ ಸಂದರ್ಭದಲ್ಲಿ ಇವರು ಧಾರವಾಡದಿಂದ ಸಂಸತ್ ಚುನಾವಣೆಗೆ ಸ್ಪರ್ಧಿಸಿ ಅನಾಯಾಸವಾಗಿ ಗೆದ್ದು ಬಂದರು. ಆ ಮೂಲಕ ಇಂದಿರಾ ಗಾಂಧಿ ಸಚಿವ ಸಂಪುಟದಲ್ಲಿ ವಿಮಾನಯಾನ, ಪರಿಸರ ಹಾಗೂ ಕಾನೂನು ಸಚಿವೆಯಾಗಿ ಸೇವೆ ಸಲ್ಲಿಸಿದರು. ಇವರಲ್ಲಿ ಅಪಾರ ನಂಬಿಕೆ ಇಟ್ಟಿದ್ದ ಇಂದಿರಾ ಗಾಂಧಿ ತಮ್ಮ ಬಂಗಲೆಯ ಪಕ್ಕದಲ್ಲೇ ಇವರಿಗೆ ಮನೆ ನೀಡಿದ್ದರು. ಹೀಗಾಗಿ ಪ್ರಧಾನಿ ಅವರ ಬಹುತೇಕ ಕಡತಗಳನ್ನು ಇವರೇ ನೋಡಿಕೊಳ್ಳುತ್ತಿದ್ದರು. ಆ ಮೂಲಕ ಇಂದಿರಾ ಅವರ ‘ಬಲಗೈ’ ಎಂದೇ ಬಿಂಬಿತವಾಗಿದ್ದರು.
ಆದರೆ, ಮುಂದೆ ಒಂದು ಸಂದರ್ಭದಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಟೀ ಪಾರ್ಟಿಗೆ ಹೋಗಿದ್ದ ಸರೋಜಿನಿ ಅವರ ನಿಲುವನ್ನು ಇಷ್ಟಪಡದ ಇಂದಿರಾ ಗಾಂಧಿ ಕ್ರಮೇಣ ಇವರನ್ನು ದೂರ ಸರಿಸಲು ಆರಂಭಿಸಿದರು. ಅಲ್ಲಿಂದಲೇ ಇವರ ರಾಜಕೀಯ ಜೀವನ ಅವಸಾನದತ್ತ ಸಾಗಿತ್ತು.
ನಂತರದ ಸಂಸತ್ ಚುನಾವಣೆಯಲ್ಲಿ ಅವರು ಸ್ವತಂತ್ರ್ಯ ಅಭ್ಯರ್ಥಿಯಾಗಿ ಧಾರವಾಡ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ ಆಗ ಅವರು ಸೋತರು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇವರಿಗೆ ಒಮ್ಮೆ ಯಾರೋ ಕಿಡಿಗೇಡಿಗಳು ಕಲ್ಲು ಎಸೆದಿದ್ದರು. ಆಗ ‘ಈ ಒಂದು ಕಲ್ಲು ಲಕ್ಷ ಮತಗಳಾಗಿ ಪರಿವರ್ತನೆಯಾಗಲಿದೆ’ ಎಂದು ಹೇಳಿದ್ದರು. ಆದರೆ ದುರದೃಷ್ಟ ವಶಾತ್ ಅವರು ಚುನಾವಣೆಯಲ್ಲಿ ಸೋತರು. ಅಲ್ಲಿಂದ ಇವರ ರಾಜಕೀಯ ಬದುಕು ಇನ್ನಷ್ಟು ಕ್ಷೀಣಿಸುತ್ತಾ ಸಾಗಿತು.
ನಾನು ಮತ್ತು ಸರೋಜಿನಿ: 1976ರಲ್ಲಿ ಐಆರ್ಎಸ್ ಪಾಸು ಮಾಡಿದ್ದ ನಾನು ಆದಾಯ ತೆರಿಗೆ ಇಲಾಖೆಯ ಉಪ ಕಾರ್ಯದರ್ಶಿಯಾಗಿ ದೆಹಲಿಗೆ ಹೋದೆ. ಆಗ ಸರೋಜಿನಿ ಅವರನ್ನು ಭೇಟಿಯಾಗಲು ಹೋಗಿದ್ದೆ. ಆಗ ಅವರು ಕಾನೂನು ಸಚಿವರಾಗಿದ್ದರು. ಅದಾಗಲೇ ಸರೋಜಿನಿ ಹಾಗೂ ಇಂದಿರಾ ನಡುವಣ ಸಂಬಂಧ ಹಳಸಿತ್ತು. ಸರೋಜಿನಿ ಮನೆಯ ಮುಂದೆ ಸೈನಿಕರನ್ನು ನೇಮಿಸಿ ಇವರ ಮನೆಗೆ ಬಂದು ಹೋಗುವವರ ವರದಿಯನ್ನು ದಾಖಲಿಸಲಾಗುತ್ತಿತ್ತು.
ವಿವಾದಿತ ಮಹಿಳೆ: ಅದೇ ಸಂದರ್ಭದಲ್ಲಿ ಅವರು ದೆಹಲಿಯ ಕರ್ನಾಟಕ ಸಂಘ ಆರಂಭಿಸಿದ್ದರು. ತಮ್ಮ ಮಂತ್ರಿ ಪದವಿಯನ್ನು ಬಳಸಿಕೊಂಡು ದೆಹಲಿಯ ಏರ್ಪೋರ್ಟ್ ರಸ್ತೆಯ ಆರ್.ಕೆ. ಪುರಂನಲ್ಲಿ ಜಾಗ ಪಡೆದು ಕರ್ನಾಟಕ ಸಂಘ ಹಾಗೂ ಕನ್ನಡ ಶಾಲೆ ಆರಂಭಿಸಿದ್ದರು. ಅಲ್ಲಿಂದ ಅವರು ವಿವಾದಿತ ಮಹಿಳೆಯಾಗಿ ರೂಪುಗೊಂಡರು.
ಕೆಲವೇ ಜನರ ಕೂಟವನ್ನೊಳಗೊಂಡ ಸಂಘ ಕಟ್ಟಬೇಕೆನ್ನುವುದು ಅವರ ಇರಾದೆಯಾಗಿತ್ತು. ಆದರೆ ಕರ್ನಾಟಕದ ಹೆಸರಿನಲ್ಲಿರಬೇಕಾದ ಸಂಘ ಹಾಗೂ ಶಾಲೆ ಸಮಸ್ತ ಕನ್ನಡಿಗರಿಗೆ ಸೇರಬೇಕಾದ್ದರಿಂದ ಪ್ರತಿಯೊಬ್ಬರಿಗೂ ಸದಸ್ಯತ್ವ ಪಡೆಯುವ ಹಕ್ಕು ನೀಡಬೇಕು. ಅಲ್ಲೂ ಚುನಾವಣೆಗಳು ನಡೆಯಬೇಕು ಎಂಬ ವಾದದೊಂದಿಗೆ ಪ್ರತಿಭಟನೆಗಳು ನಡೆದವು. ಸಂಘಕ್ಕಾಗಿ ಪಡೆದ ಜಮೀನಿನ ಒಡೆತನ ತಮ್ಮ ಹೆಸರಿನಲ್ಲೇ ಇರಬೇಕೆಂಬ ಅವರ ನಿಲುವನ್ನು ಪ್ರತಿಯೊಬ್ಬರೂ ವಿರೋಧಿ ಸಿದರು. ಎರಡು ವರ್ಷ ಯಾರೊಬ್ಬರನ್ನೂ ಹತ್ತಿರಕ್ಕೆ ಬರಲು ಬಿಡಲಿಲ್ಲ.
ನಾನೂ ಸರೋಜಿನಿ ಅವರ ನಿಲುವಿನ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡಿದ್ದೆ. ನಾವೆಲ್ಲರೂ ಪ್ರತಿಭಟನೆ ರೂಪದಲ್ಲಿ ಸಂಘಕ್ಕೆ ಹೋಗಿ ಮುಚ್ಚಿದ್ದ ಗೇಟನ್ನು ತಳ್ಳಿ ಒಳಗೆ ಹೋಗಿ ಘೋಷಣೆಗಳನ್ನು ಕೂಗಿ ಅವರ ನಿಲುವನ್ನು ಖಂಡಿಸಿದೆವು. ನಂತರ ಅವರು ಸಂಘ ಹಾಗೂ ಶಾಲೆ ಎರಡರಲ್ಲೂ ತಮ್ಮ ಪ್ರಭಾವವನ್ನು ಕಳೆದುಕೊಂಡರು. ನಾನೂ ಕರ್ನಾಟಕ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ.
ಅದೇ ಸಂದರ್ಭದಲ್ಲಿ ಒಂದು ದಿನ ನನ್ನನ್ನು ಉಪಾಹಾರಕ್ಕೆಂದು ಅವರು ಮನೆಗೆ ಕರೆದಿದ್ದರು. ತಮ್ಮ ವಿಶಾಲ ಬಂಗಲೆ ತೋರಿಸಿದರು. ಬೆಣ್ಣೆಯ ದೋಸೆ ಮಾಡಿ ಬಡಿಸಿದ್ದು ಇನ್ನೂ ನೆನಪಿದೆ.
ನಂತರ ಚಂದ್ರಶೇಖರ್ ಅವರು ಅಧಿಕಾರಕ್ಕೆ ಬಂದಾಗ ಸರೋಜಿನಿ ಅವರಿಗೆ ಸಂಸ್ಥೆಯೊಂದರ ಜವಾಬ್ದಾರಿ ವಹಿಸಿದ್ದರು. ಅದಾದ ನಂತರ ಅವರು ದೆಹಲಿ ಯಿಂದ ದೂರದ ಘಾಜಿಯಾ-ಬಾದ್ನಲ್ಲಿ ನೆಲೆಸಿದರು. ಅಲ್ಲಿ ಏಕೆ ನೆಲೆಸಿದರು ಎಂಬುದು ತಿಳಿದಿಲ್ಲ.
(ಆದಾಯ ತೆರಿಗೆ ಇಲಾಖೆಯ ನಿವೃತ್ತ ಮುಖ್ಯ ಆಯುಕ್ತ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.