ಸಂತೇಮರಹಳ್ಳಿ: ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವ ಜತೆಗೆ ರೋಗಿಗಳಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಸಂಸದ
ಆರ್. ಧ್ರುವನಾರಾಯಣ್ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ವಾರ್ಡ್ಗಳನ್ನು ಪರಿಶೀಲಿಸಿ ಮತ್ತು ರೋಗಿಗಳನ್ನು ಭೇಟಿ ಮಾಡಿ ಮಾತನಾಡಿದರು. ಕುಡಿಯುವ ನೀರು ಹಾಗೂ ಆಸ್ಪತ್ರೆಯ ಸ್ವಚ್ಛತೆಗಾಗಿ ಸರ್ಕಾರ ಸಾಕಷ್ಟು ಅನುದಾನವನ್ನು ನೀಡುತ್ತಿದೆ. ಬಳಕೆ ಮಾಡಿಕೊಂಡು ಆಸ್ಪತ್ರೆಯ ಸ್ವಚ್ಛತೆಗೆ ಗಮನ ಹರಿಸಬೇಕು ಎಂದು ಸೂಚಿಸಿದರು.
ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ₨ 10 ಕೋಟಿ ವೆಚ್ಚದಲ್ಲಿ 60 ಹಾಸಿಗೆವುಳ್ಳ ಆಸ್ಪತ್ರೆ ಮತ್ತು ವೈದ್ಯಾಧಿಕಾರಿಗಳ ಹಾಗೂ ದಾದಿಯರ ವಸತಿಗೃಹಗಳ ಕಾಮಗಾರಿ ನಡೆಯುತ್ತಿದೆ. 3 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸಂಬಂಧಪಟ್ಟ ಎಂಜಿನಿಯರ್ಗೆ ಸೂಚಿಸಿದರು.
ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಜಾಗದ ಅಳತೆ ನೀಡಿಲ್ಲ. ಕಟ್ಟಡ ನಿರ್ಮಾಣವಾಗುವ ಸ್ಥಳದಲ್ಲಿರುವ ವಿದ್ಯುತ್ ಪರಿವರ್ತಕವನ್ನು ತೆರವುಗೊಳಿಸಬೇಕು. ಇದರಿಂದ ಕಾಮಗಾರಿ ವಿಳಂಬವಾಗಿದೆ. ಸ್ಥಳದ ನಿವೇಶನದ ಅಳತೆ ಮತ್ತು ವಿಸ್ತೀರ್ಣವನ್ನು ಸಕಾಲದಲ್ಲಿ ಒದಗಿಸಿ ಕೊಟ್ಟರೇ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಎಂಜಿನಿಯರ್ ಸಂಸದರಿಗೆ ಮನವಿ ಮಾಡಿದರು.
ಆಸ್ಪತ್ರೆ ವ್ಯಾಪ್ತಿಗೆ ಒಳಪಡುವ 4 ಎಕರೆ 15 ಗುಂಟೆ ಜಾಗವನ್ನು ಪರಿಶೀಲಿಸಿ ತಕ್ಷಣದಲ್ಲಿ ಒತ್ತುವರಿಯಾಗಿರುವ ಸ್ಥಳಗಳನ್ನು ಪೊಲೀಸರ ಸಹಕಾರ ಪಡೆದು ತೆರವುಗೊಳಿಸಿ ಸರ್ವೆ ನಡೆಸಿ ಜಾಗದ ಪತ್ರವನ್ನು ಆಸ್ಪತ್ರೆಗೆ ಒದಗಿಸಿಕೊಡಬೇಕು ಎಂದು ತಹಶೀಲ್ದಾರ್ಗೆ ಸಂಸದರು ಸೂಚನೆ ನೀಡಿದರು.
ಮಾಜಿ ಶಾಸಕ ಎಸ್. ಬಾಲರಾಜು, ಜಿಲ್ಲಾಪಂಚಾಯಿತಿ ಸದಸ್ಯ ಬಿ.ಪಿ. ಪುಟ್ಟಬುದ್ಧಿ, ಎಪಿಎಂಸಿ ಅಧ್ಯಕ್ಷ ಆಲ್ದೂರು ರಾಜಶೇಖರ್, ತಹಶೀಲ್ದಾರ್ ಮಹದೇವು, ವೈದ್ಯಾಧಿಕಾರಿ ರೇಣುಕಾದೇವಿ, ದೇವರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸದಾಶಿವಮೂರ್ತಿ, ಡಿ.ಪಿ. ಪ್ರಕಾಶ್ ಟಿ.ಕೆ. ರಂಗಯ್ಯ, ಹಾಜರಿದ್ದರು.