ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಪೊರಕೆಯಿಂದ ಕಸಗುಡಿಸುವ ಮೂಲಕ ‘ಸ್ವಚ್ಛ ಭಾರತ ಅಭಿಯಾನ’ಕ್ಕೆ ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ದಿನ ಚಾಲನೆ ನೀಡಿದ್ದಾರೆ. ಮಹಾತ್ಮ ಗಾಂಧೀಜಿ ಅವರ ‘ನಿರ್ಮಲ ಭಾರತ’ ಕನಸನ್ನು ಮುಂದಿನ ಐದು ವರ್ಷಗಳಲ್ಲಿ ನನಸು ಮಾಡುವ ಪಣವನ್ನು ಅವರು ತೊಟ್ಟಿದ್ದಾರೆ.
ಇದಕ್ಕಾಗಿ ₨ 2 ಲಕ್ಷ ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಸ್ವತಃ ಪ್ರಧಾನಿಗಳೇ ಕೈಯಲ್ಲಿ ಪೊರಕೆ ಹಿಡಿದು ಈ ಅಭಿಯಾನಕ್ಕೆ ಚಾಲನೆ ನೀಡಿರುವುದು ನಾಟಕೀಯ ಎಂದೆನಿಸುವಂತಹದ್ದು. ಆದರೆ ಸಶಕ್ತ ಸಾಂಕೇತಿಕತೆಯನ್ನೂ ಧ್ವನಿಸುವಂತಹದ್ದು. ರಾಷ್ಟ್ರಪತಿ ಸೇರಿದಂತೆ, ಸಚಿವರು, ರಾಜಕೀಯ ನೇತಾರರು ಹಾಗೂ ಅಧಿಕಾರಿಗಳು ಸ್ವಚ್ಛತಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
50 ವರ್ಷಗಳ ಹಿಂದೆಯೂ, ಗಾಂಧಿ ಜಯಂತಿಯ ದಿನವನ್ನು ‘ರಾಷ್ಟ್ರೀಯ ನೈರ್ಮಲ್ಯ ದಿನಾಚರಣೆ’ಯಾಗಿ ರಾಷ್ಟ್ರದಲ್ಲಿ ಆಚರಿಸಲಾಗಿತ್ತು. ನೈರ್ಮಲ್ಯದ ಬಗ್ಗೆ ತಮ್ಮ ಜವಾಬ್ದಾರಿಯ ಕುರಿತಂತೆ ಜನರಲ್ಲಿ ಅರಿವನ್ನು ಮೂಡಿಸುವುದು ಇದರ ಉದ್ದೇಶವಾಗಿತ್ತು. ನಂತರವೂ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಈ ಬಗ್ಗೆ ನಾಗರಿಕ ಪ್ರಜ್ಞೆ ಇನ್ನೂ ಜಾಗೃತಗೊಂಡಿಲ್ಲ ಎಂಬುದು ದುರದೃಷ್ಟದ ಸಂಗತಿ.
ನಮ್ಮ ಮನೆಗಳು ಸ್ವಚ್ಛವಾಗಿದ್ದರೆ ಸರಿ. ಸಾರ್ವಜನಿಕ ಸ್ವಚ್ಛತೆ ಎಂಬುದು ಬೇರೆಯವರು ನಿರ್ವಹಿಸಬೇಕಾದದ್ದು ಎಂಬಂಥ ಮನೋಭಾವ ಜಾತಿ ವ್ಯವಸ್ಥೆಯಿಂದ ಕೂಡಿದ ಭಾರತೀಯ ಸಮಾಜದಲ್ಲಿ ಅಂತರ್ಗತ. ಈ ಮನೋಭಾವ ಮೊದಲಿಗೆ ಬದಲಾಗ ಬೇಕಿರುವುದು ಅವಶ್ಯ. ನಮ್ಮ ಶಾಲಾ ಪಠ್ಯಗಳು, ಎಳೆಯ ವಯಸ್ಸಿನಲ್ಲಿಯೇ ಈ ಬಗ್ಗೆ ಜಾಗೃತಿ ಮೂಡಿಸುವಂತಿರಬೇಕು. ಅಭಿವೃದ್ಧಿ ಸಾಧಿಸುತ್ತಾ ನಗರಗಳು ತ್ವರಿತವಾಗಿ ಬೆಳೆದಂತೆ ಕಸ ವಿಲೇವಾರಿ ಸಮಸ್ಯೆಯೂ ಬೃಹದಾಕಾರ ತಾಳುತ್ತದೆ.
ಬೆಂಗಳೂರಿನ ಕಸವನ್ನು ಮಂಡೂರು ಗ್ರಾಮದಲ್ಲಿ ಸುರಿಯಲಾಗುತ್ತಿದ್ದು ಅಲ್ಲಿನ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆ ಇದಕ್ಕೆ ಜ್ವಲಂತ ಉದಾಹರಣೆ. ಕಸವನ್ನು ಮೂಲದಲ್ಲೇ ಬೇರ್ಪಡಿಸಿ ವಿಲೇವಾರಿ ಮಾಡುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬ ನಾಗರಿಕರೂ ನಿರ್ವಹಿಸದ ಹೊರತು ಸ್ವಚ್ಛ ಭಾರತ ಅಭಿಯಾನ ಯಶಸ್ಸು ಸಾಧಿಸುವುದು ಸಾಧ್ಯವಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ನೆಲೆಗಳಲ್ಲಿ ದೊಡ್ಡದೊಂದು ಆಂದೋಲನವೇ ಆಗಬೇಕು. ಇದು ಸುದೀರ್ಘವಾದ ಪಯಣ ಹಾಗೂ ನಿರಂತರವಾದುದು.
ಕಡಿಮೆ ಬಳಕೆ, ಮರು ಬಳಕೆ ಹಾಗೂ ಪುನರ್ ಸಂಸ್ಕರಿಸುವ ತತ್ವಗಳನ್ನು ಪಾಲಿಸದಿದ್ದಲ್ಲಿ ಕಸ ವಿಲೇವಾರಿ ಎಂಬುದು ಬೃಹದಾಕಾರದ ಸಮಸ್ಯೆಯಾಗಿ ಪರಿಸರವನ್ನೂ ಹಾಳುಗೆಡವುತ್ತದೆ ಎಂಬುದು ಜನರ ಪ್ರಜ್ಞೆಯ ಆಳಕ್ಕಿಳಿಯಬೇಕಿದೆ. ಭಾರತದಲ್ಲಿ ಶಿಶು ಮರಣ ಹಾಗೂ ಅಪೌಷ್ಟಿಕತೆಗೆ ಬಯಲು ಶೌಚಾಲಯ ಪದ್ಧತಿಯೂ ಒಂದು ಕಾರಣ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಹೀಗಿದ್ದೂ ನಮ್ಮ ರಾಷ್ಟ್ರದಲ್ಲಿ ಶೌಚಾಲಯಗಳಿಗಿಂತ ಮೊಬೈಲ್ ಬಳಸುವವರ ಸಂಖ್ಯೆ ಹೆಚ್ಚಿದೆ ಎಂಬುದು ವಿಪರ್ಯಾಸ.
ದೇವಾಲಯಗಳಿಗಿಂತ ಶೌಚಾಲಯಗಳು ಮುಖ್ಯ ಎಂಬುದನ್ನು ನರೇಂದ್ರ ಮೋದಿಯವರು ತಮ್ಮ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಪ್ರಸ್ತಾಪಿಸಿದ್ದರು. ಈ ಹಿಂದೆ ಯುಪಿಎ ಸರ್ಕಾರವಿದ್ದಾಗ ಜೈರಾಂ ರಮೇಶ್ ಅವರೂ ಈ ವಾದ ಮಂಡಿಸಿದ್ದರು. ಆದರೆ ಈ ವಿಚಾರದಲ್ಲಿ ಪ್ರಗತಿ ಸಾಧನೆಗೆ ಜನರಲ್ಲಿ ಹಾಸುಹೊಕ್ಕಾಗಿರುವ ಮೂಢನಂಬಿಕೆಗಳೂ ಅಡ್ಡಬರುತ್ತವೆ ಎಂಬುದನ್ನು ಮರೆಯಲಾಗದು. ಹೀಗಾಗಿ ‘ಸ್ವಚ್ಛ ಭಾರತ’ ನಿರ್ಮಾಣದ ಹಾದಿ ಸಂಕೀರ್ಣವಾದದ್ದು. ಈ ಗುರಿ ಸಾಧನೆಗೆ ಸರ್ಕಾರ, ಅಧಿಕಾರಶಾಹಿ ಹಾಗೂ ಜನಸಾಮಾನ್ಯರು ಒಟ್ಟಾಗಿ ಶ್ರಮಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.