ನವದೆಹಲಿ: ಮಹಾತ್ಮಾ ಗಾಂಧಿ ಜನ್ಮದಿನವಾದ ಅಕ್ಟೋಬರ್ 2 ರಂದು ಕೇಂದ್ರ ಸರ್ಕಾರ ಸ್ವಚ್ಛ ಭಾರತ ಆಂದೋಲನಕ್ಕೆ ಚಾಲನೆ ನೀಡಲಿದೆ. ಅಂದು ಕೇಂದ್ರ ಸರ್ಕಾರಿ ನೌಕರರು ತಮ್ಮ ಕಚೇರಿಗಳಿಗೆ ಹಾಜರಾಗಿ ಸ್ವಚ್ಛತಾ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಸೂಚಿಸಲಾಗಿದೆ.
ಅಕ್ಟೋಬರ್ 2 ರಾಷ್ಟ್ರೀಯ ರಜಾ ದಿನವಾಗಿದ್ದರೂ ಎಲ್ಲಾ ನೌಕರರು ಕಚೇರಿಗೆ ಬರಬೇಕು. ವಿಭಾಗದ ಮುಖ್ಯಸ್ಥರು ಅವರಿಗೆ ‘ಸ್ವಚ್ಛತಾ ಶಪಥ’ ಬೋಧಿಸಬೇಕು. ಸ್ವಾತಂತ್ರ್ಯ ದಿನದಂತೆಯೇ ಕಾರ್ಯಕ್ರಮ ಮುಗಿದ ಬಳಿಕ ಅವರು ಮನೆಗೆ ತೆರಳಬಹುದು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಗುರುವಾರ ತಿಳಿಸಿದರು. ‘ಸ್ವಚ್ಛ ಭಾರತ ಮಿಷನ್’ ಲಾಂಛನ ಬಿಡುಗಡೆ ಮಾಡಿದ ಬಳಿಕ ಮಾತನಾಡಿ, ಆಂದೋಲನದಲ್ಲಿ ರಾಜ್ಯ ಸರ್ಕಾರಗಳು ಸಹಾ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
2019ರ ವೇಳೆಗೆ ಭಾರತ ಸಂಪೂರ್ಣ ಸ್ವಚ್ಛಗೊಳ್ಳಬೇಕು ಎಂಬ ಆಶಯ ಹೊಂದಿರುವ ಕೇಂದ್ರ ಸರ್ಕಾರ ಐದು ವರ್ಷಗಳಲ್ಲಿ ಸುಮಾರು ₨ 2 ಲಕ್ಷ ಕೋಟಿ ವಿನಿಯೋಗಿಸಲಿದೆ ಎಂದು ನಾಯ್ಡು ತಿಳಿಸಿದರು. ಅಲ್ಲದೇ ಎಲ್ಲಾ ಧಾರ್ಮಿಕ ಕೇಂದ್ರಗಳು ಹಾಗೂ ವಿವಿಧ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ನಗರ ಅಭಿವೃದ್ಧಿ ಸಚಿವಾಲಯ ₨ 62ಸಾವಿರ ಕೋಟಿ ಹಾಗೂ ಕುಡಿಯುವ ನೀರು ಸಚಿವಾಲಯ ₨1.34 ಕೋಟಿ ಲಕ್ಷ ಅನುದಾನ ನೀಡಲಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದರು.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಶಾಲೆಗಳಲ್ಲಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಸ್ವಚ್ಛತೆಯನ್ನು ಕಾಪಾಡಬೇಕು ಎಂದರು.