ಅಮೃತಸರ (ಪಿಟಿಐ): ಸ್ವರ್ಣ ಮಂದಿರದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು ಅರ್ಧ ತಾಸು ಕಾಲ ಸಿಖ್ಖರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಕನಿಷ್ಠ 12 ಜನರು ಗಾಯಗೊಂಡಿದ್ದಾರೆ.
ಸ್ವರ್ಣ ಮಂದಿರ ಸಂಕೀರ್ಣದೊಳಗಿನ ಅಕಾಲ್ ತಖ್ತ್ (ಸಿಖ್ಖರ ಐದು ಧಾರ್ಮಿಕ ಪೀಠಗಳಲ್ಲಿ ಒಂದು) ಕಟ್ಟಡದ ಹೊರಗೆ ಉದ್ರಿಕ್ತ ಜನರು ಖಡ್ಗ, ಭರ್ಚಿ ಮತ್ತು ದೊಣ್ಣೆಗಳಿಂದ ಹೊಡೆದಾಡಿದರು. ಕೆಲವರು ರಕ್ಷಣೆಗಾಗಿ ಓಡಿ ಹೋದರು.
ನಿವೃತ್ತ ಐಪಿಎಸ್ ಅಧಿಕಾರಿ ಸಿಮ್ರನ್ಜಿತ್ ಸಿಂಗ್ ಮಾನ್ ನೇತೃತ್ವದ ಅಕಾಲಿ ದಳದ ಒಂದು ಬಣವು ಅಕಾಲ್ ತಖ್ತ್ನ ವೇದಿಕೆಯಿಂದ ಖಲಿಸ್ತಾನ ಪರವಾದ ಘೋಷಣೆಗಳನ್ನು ಕೂಗಲು ಯತ್ನಿಸಿತು. ಇದೇ ಸಂಘರ್ಷಕ್ಕೆ ಕಾರಣವಾಯಿತು.
ಬ್ಲೂಸ್ಟಾರ್ ಕಾರ್ಯಾಚರಣೆಯ 30ನೇ ವರ್ಷದ ಸಂಬಂಧ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡದಂತೆ ಮಾನ್ ಅವರನ್ನು ತಡೆಯಲಾಯಿತು. ಹೀಗಾಗಿ ಶಿರೋಮಣಿ ಅಕಾಲಿ ದಳ (ಅಮೃತಸರ) ಮತ್ತು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ (ಎಸ್ಜಿಪಿಸಿ) ಸ್ವಯಂ ಸೇವಕರ ನಡುವೆ ಘರ್ಷಣೆ ನಡೆಯಿತು. ಖಡ್ಗ, ಭರ್ಚಿ, ದೊಣ್ಣೆ ಉಪಯೋಗಿಸಿ ಹಲ್ಲೆ ನಡೆಸಲಾಯಿತು.
ಇದರಿಂದಾಗಿ ಎಸ್ಜಿಪಿಸಿಯ ಐವರು ಸದಸ್ಯರು ಗಾಯಗೊಂಡಿದ್ದಾರೆ ಎಂದು ಅಮೃತಸರ ಪೊಲೀಸ್ ಆಯುಕ್ತ ಜತೀಂದರ್ ಸಿಂಗ್ ಔಲಖ್ ತಿಳಿಸಿದ್ದಾರೆ.
ಸ್ವರ್ಣ ಮಂದಿರದೊಳಗೆ ಪೊಲೀಸ್ ಸಿಬ್ಬಂದಿಗೆ ಪ್ರವೇಶ ಇಲ್ಲ. ಇಲ್ಲಿನ ಭದ್ರತೆ ಮತ್ತು ಇತರ ಎಲ್ಲ ನಿಯಂತ್ರಣವೂ ಎಸ್ಜಿಪಿಸಿಯದ್ದಾಗಿದೆ ಎಂದು ಔಲಕ್ ಹೇಳಿದ್ದಾರೆ. ಈಗ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಸ್ವರ್ಣ ಮಂದಿರದಲ್ಲಿನ ಪ್ರಾರ್ಥನೆಗೆ ಯಾವುದೇ ತೊಡಕು ಉಂಟಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಮಾಜವಿರೋಧಿ ಶಕ್ತಿಗಳು ಈ ಘಟನೆಗೆ ಕಾರಣವಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ದೇಗುಲ ನಗರಿ ಅಮೃತಸರದಲ್ಲಿ ಬ್ಲೂಸ್ಟಾರ್ ಕಾರ್ಯಾಚರಣೆಯ 30ನೇ ವರ್ಷದ ಸಂಬಂಧ ಗುರುವಾರ ಬಂದ್ಗೂ ಕರೆ ನೀಡಲಾಗಿತ್ತು.