ನವದೆಹಲಿ (ಪಿಟಿಐ): ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರು ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಯು.ಯು. ಲಲಿತ್ ಅವರಿದ್ದ ನ್ಯಾಯಪೀಠ, ಕ್ರಿಮಿನಲ್ ಮಾನಹಾನಿ ದಾಖಲಿಸಲು ದಂಡನೆಯ ಕಾನೂನುಗಳ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು.
ಸ್ವಾಮಿ ಅವರ ವಿರುದ್ಧ ಚೆನ್ನೈ ಸೆಷೆನ್ಸ್ ನ್ಯಾಯಾಲಯದಲ್ಲಿ ದಾಖಲಾಗಿರುವ ಎಲ್ಲಾ ಐದೂ ಮಾನನಷ್ಟ ಮೊಕದ್ದಮೆಗಳ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ತನ್ನ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ನಿಬಂಧನೆಗಳು ಅಸಾಂವಿಧಾನಿಕವಾಗಿವೆ. ಇದು ಮುಕ್ತವಾಗಿ ಮಾತನಾಡುವ ಹಾಗೂ ಅಭಿಪ್ರಾಯ ವ್ಯಕ್ತಪಡಿಸುವ ಜನರ ಹಕ್ಕಿನ ಮೇಲೆ ಅನಗತ್ಯ ತಡೆಯಾಗುತ್ತದೆ ಎಂದು ಸ್ವಾಮಿ ಅವರು ನ್ಯಾಯಾಲಯಕ್ಕೆ ಹೇಳಿದ್ದರು.
ಅಲ್ಲದೇ, ಕ್ರಿಮಿನಲ್ ಮಾನನಷ್ಟಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ 499 ಹಾಗೂ 500 ಕಲಂಗಳು ಹಾಗೂ ಅಪರಾಧಿಕ ದಂಡ ಪ್ರಕ್ರಿಯಾ ಸಂಹಿತೆಯ 199 (2) ಸಿಂಧುತ್ವನ್ನು ಸ್ವಾಮಿ ಅವರು ಪ್ರಶ್ನಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಜಯಲಲಿತಾ ಅವರ ವಿರುದ್ಧ ಅಪಮಾನಕಾರಿ ಟೀಕೆ ಮಾಡಿದ ಆರೋಪದಡಿ ತಮಿಳುನಾಡು ಸರ್ಕಾರ ಸ್ವಾಮಿ ಅವರ ವಿರುದ್ಧ ಐದು ಮಾನಹಾನಿ ದೂರುಗಳನ್ನು ದಾಖಲಿಸಿತ್ತು.