ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಆನೆಗೊಂದಿ ಗ್ರಾಮದ ಬಳಿ ಇರುವ ನವವೃಂದಾವನ ಗಡ್ಡೆಗೆ ತೆರಳಿದ ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರತೀರ್ಥರು ಗುರುವಾರ ನವ ವೃಂದಾವನಕ್ಕೆ ಪೂಜೆ ನೆರವೇರಿಸಿ ಮಳೆ, ರಾಜ್ಯಕ್ಕೆ ಆವರಿಸಿರುವ ಕ್ಷಾಮ ಪರಿಹಾರಕ್ಕೆ ಪ್ರಾರ್ಥನೆ ಸಲ್ಲಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ ಗಡ್ಡೆಯ ಧಾರ್ಮಿಕ, ಪೂಜೆ ಮೊದಲಾದ ಹಕ್ಕುಗಳ ಬಗ್ಗೆ ಉತ್ತರಾದಿ ಮತ್ತು ರಾಯರ ಮಠದ ನಡುವಿನ ವಿವಾದ ನ್ಯಾಯಾಲಯದಲ್ಲಿ ಇದೆ. ಯಾವುದೇ ತೀರ್ಪಿಗೂ ಬದ್ಧರಾಗಿದ್ದೇವೆ ಎಂದರು.
ವೃಂದಾವನ ದರ್ಶನಕ್ಕೆ ಆಗಮಿಸಿದ್ದೇನೆ. ನಾಡಿನಲ್ಲಿ ಭೀಕರ ಬರಗಾಲ ಆವರಿಸಿದೆ. ಬರ ಪರಿಹಾರವಾಗಿ, ಸಮೃದ್ಧ ಮಳೆ-–ಬೆಳೆಯಾಗಲಿ ಎಂದು ಗುರುಗಳಲ್ಲಿ ಪ್ರಾರ್ಥಿಸಲಾಗಿದೆ ಎಂದರು.