ನವದೆಹಲಿ (ಪಿಟಿಐ): ‘ಬ್ಯಾಂಕುಗಳಲ್ಲಿ ಕಪ್ಪುಹಣ ಇಟ್ಟಿರುವ ಭಾರತೀಯರ ಮಾಹಿತಿಯನ್ನು ಶೀಘ್ರವೇ ಭಾರತದೊಂದಿಗೆ ಹಂಚಿಕೊಳ್ಳುವಂತೆ ಸ್ವಿಟ್ಜರ್ಲೆಂಡ್ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ’ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಸೋಮವಾರ ಹೇಳಿದ್ದಾರೆ.
‘ಈ ಸಂಬಂಧ ಸಚಿವಾಲಯವು ಅಧಿಕೃತ ಮಾಹಿತಿಯನ್ನು ಇನ್ನಷ್ಟೇ ಪಡೆಯಬೇಕಿದೆ. ಆದ್ದರಿಂದ ಸ್ವಿಟ್ಜರ್ಲೆಂಡ್ ಅಧಿಕಾರಿಗಳಿಗೆ ನಾವೇ ಖುದ್ದಾಗಿ ಪತ್ರ ಬರೆಯುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
ತನ್ನ ದೇಶದ ಬ್ಯಾಂಕುಗಳಲ್ಲಿ ಕಪ್ಪು ಹಣ ಇಟ್ಟ ಭಾರತೀಯರ ಪಟ್ಟಿ ಸಿದ್ಧಪಡಿಸಲಾಗಿದ್ದು, ಅದನ್ನು ಭಾರತ ಸರ್ಕಾರದೊಂದಿಗೆ ಹಂಚಿಕೊಳ್ಳಲು ಸಿದ್ಧ ಎಂದು ಭಾನುವಾರ ಸ್ವಿಟ್ಜರ್ಲೆಂಡ್ ಹೇಳಿತ್ತು.
‘ಹಣಕಾಸು ಸಚಿವಾಲಯ ಅಲ್ಲಿನ ಅಧಿಕಾರಿಗಳ ಸಂಪರ್ಕದಲ್ಲಿದೆ. ಕಪ್ಪು ಹಣಕ್ಕೆ ಸಂಬಂಧಿಸಿ ಅವರ ಬಳಿ ಏನೆಲ್ಲ ಮಾಹಿತಿ ಇದೆಯೋ ಅದನ್ನು ಶೀಘ್ರವೇ ಅವರು ನಮ್ಮೊಂದಿಗೆ ಹಂಚಿಕೊಳ್ಳಬಹುದು. ಈ ಸಂಬಂಧ ಸ್ವಿಟ್ಜರ್ಲೆಂಡ್ ಅಧಿಕಾರಿಗಳು ಹಾಗೂ ಭಾರತ ಸರ್ಕಾರದ ನಡುವಣ ಸಹಕಾರವು ಫಲದಾಯಕ ಫಲಿತಾಂಶ ಕೊಡಬಲ್ಲದು’ ಎಂದು ಜೇಟ್ಲಿ ನುಡಿದರು.
ಸ್ವಿಟ್ಜರ್ಲೆಂಡ್ ಸೆಂಟ್ರಲ್ ಬ್ಯಾಂಕ್ ಎಸ್ಎನ್ಬಿ ಪ್ರಕಾರ, ಆ ದೇಶದ ವಿವಿಧ ಬ್ಯಾಂಕುಗಳಲ್ಲಿ ಭಾರತೀಯರ ಕಪ್ಪು ಹಣ 2013ರಲ್ಲಿ ಶೇ 43ರಷ್ಟು ಹೆಚ್ಚಾಗಿದ್ದು, ₨ 14,000 ಕೋಟಿ ತಲುಪಿದೆ.
ವಿದೇಶಗಳಲ್ಲಿನ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರುವ ಪ್ರಯತ್ನವಾಗಿ ಮೋದಿ ಅವರು ತಾವು ಅಧಿಕಾರಕ್ಕೆ ಬಂದ ಮೊದಲ ದಿನವೇ ವಿಶೇಷ ತನಿಖಾ ತಂಡ ರಚಿಸಿದ್ದರು.
ನಿವೃತ್ತ ನ್ಯಾಯಮೂರ್ತಿ ಎಂ.ಬಿ.ಷಾ ನೇತೃತ್ವದ ತಂಡವು ಜೂನ್ 2ರಂದು ಮೊದಲ ಸಭೆ ನಡೆಸಿತ್ತು.
ಸಹಕರಿಸಲು ಸಿದ್ಧ (ಜೂರಿಚ್ ವರದಿ): ತೆರಿಗೆ ವಂಚನೆ ವಿರುದ್ಧದ ಭಾರತದ ಹೋರಾಟದಲ್ಲಿ ಅಲ್ಲಿನ ಹೊಸ ಸರ್ಕಾರದ ಜತೆ ಕೈಜೋಡಿಸಲು ಸಿದ್ಧ ಎಂದು ಸ್ವಿಟ್ಜರ್ಲೆಂಡ್ ಸೋಮವಾರ ಹೇಳಿದೆ.
ಈ ವಿಷಯಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಸಾರವಾಗಿ ಕೆಲಸ ಮಾಡಲು ಬದ್ಧವಾಗಿರುವುದಾಗಿ ಸ್ವಿಟ್ಜರ್ಲೆಂಡ್ ಹಣಕಾಸು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ತೆರಿಗೆ ವಿಷಯವಾಗಿ ಉಭಯ ದೇಶಗಳ ನಡುವೆ ಫೆಬ್ರುವರಿಯಿಂದ ಅಧಿಕೃತ ಸಭೆ ನಡೆದಿಲ್ಲ’ ಎಂದೂ ಸಚಿವಾಲಯ ತಿಳಿಸಿದೆ.
ಕಾಯ್ದೆಗೆ ತಿದ್ದುಪಡಿ: ತೆರಿಗೆ ವಂಚನೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯಲ್ಲಿ ಭಾರತ ಸೇರಿದಂತೆ ವಿದೇಶಗಳಿಗೆ ಸುಲಭವಾಗಿ ನೆರವು ನೀಡುವ ಸಂಬಂಧ ‘ತೆರಿಗೆ ಆಡಳಿತ ನೆರವು ಕಾಯ್ದೆ’ಗೆ ಗಮನಾರ್ಹ ತಿದ್ದುಪಡಿ ತರಲು ಸ್ವಿಟ್ಜರ್ಲೆಂಡ್ ನಿರ್ಧರಿಸಿದೆ. ಸ್ವಿಸ್ ಬ್ಯಾಂಕುಗಳಲ್ಲಿ ಹಣ ಇಟ್ಟಿರುವವರ ಮಾಹಿತಿ ಹಂಚಿಕೊಳ್ಳುವಂತೆ ವಿವಿಧ ದೇಶಗಳು ಒತ್ತಡ ತಂಡ ಹಿನ್ನೆಲೆಯಲ್ಲಿ ಸ್ವಿಟ್ಜರ್ಲೆಂಡ್ ಈ ನಿರ್ಧಾರಕ್ಕೆ ಬಂದಿದೆ. ಪರಿಷ್ಕೃತ ಕಾಯ್ದೆ ಆಗಸ್ಟ್ 1ರಿಂದ ಜಾರಿಗೆ ಬರಲಿದೆ.
ಮುಂಬೈ ವರದಿ: ಕಪ್ಪು ಹಣದ ಪತ್ತೆಗೆ ನೇಮಕ ಮಾಡಿರುವ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಅಗತ್ಯವಿರುವ ಮಾಹಿತಿಗಳು ಹಾಗೂ ದಾಖಲೆಗಳನ್ನು ನೀಡುವಂತೆ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ ಆರ್ಬಿಐ ಸೋಮವಾರ ನಿರ್ದೇಶನ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.