ನವದೆಹಲಿ (ಪಿಟಿಐ): ಕರ್ನಾಟಕ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮತ್ತು ತ್ರಿಪುರಾ ರಾಜ್ಯಪಾಲ ದೇವಾನಂದ ಕೊನ್ವರ್ ಅವರು ಶನಿವಾರ (ಜೂನ್. 28) ಸೇವೆಯಿಂದ ನಿವೃತ್ತರಾಗಲಿದ್ದಾರೆ. ತಮಿಳುನಾಡು ಮತ್ತು ಮಿಜೋರಾಂ ರಾಜ್ಯಪಾಲರಿಗೆ ಈ ಎರಡೂ ರಾಜ್ಯಗಳ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
77 ವರ್ಷದ ಹಂಸರಾಜ್ ಯುಪಿಎ–1 ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದರು. 2009ರ ಜೂನ್ 29ರಂದು ಅವರು ಕರ್ನಾಟಕ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು. 71 ವರ್ಷದ ಕೊನ್ವರ್ ಅವರು ಈ ಹಿಂದೆ ಅಸ್ಸಾಂನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಬಿಹಾರದ ರಾಜ್ಯಪಾಲರಾಗಿ ಅವರು 2009ರ ಜೂನ್ 29ರಂದು ಅಧಿಕಾರ ಸ್ವೀಕರಿಸಿದರು. 2013ರ ಮಾರ್ಚ್ 29ರಂದು ಅವರನ್ನು ತ್ರಿಪುರಾದ ರಾಜ್ಯಪಾಲರಾಗಿ ನೇಮಿಸಲಾಗಿತ್ತು.
ಹೊಸ ರಾಜ್ಯಪಾಲರನ್ನು ನೇಮಿಸುವವರೆಗೆ ತಮಿಳುನಾಡು ರಾಜ್ಯಪಾಲ ಕೆ. ರೋಸಯ್ಯ ಅವರಿಗೆ ಹೆಚ್ಚುವರಿಯಾಗಿ ಕರ್ನಾಟಕ ರಾಜ್ಯಪಾಲರ ಜವಾಬ್ದಾರಿ ನೀಡಲಾಗಿದೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.