ಬೆಂಗಳೂರು: ಕೇರಳದ ಕೊಟ್ಟಾಯಂನಲ್ಲಿ ಕಂಡು ಬಂದಿರುವ ಹಕ್ಕಿ ಜ್ವರ ರಾಜ್ಯದಲ್ಲಿ ಹರಡದಂತೆ ತಡೆಯಲು ಮುಂಜಾಗ್ರತೆ ವಹಿಸಲಾಗಿದೆ ಎಂದು ಪಶು ಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದುವರೆಗೆ ರಾಜ್ಯದಲ್ಲೆಲ್ಲೂ ಈ ರೋಗ ಕಂಡು ಬಂದಿಲ್ಲ. ಆದರೂ, ಎಲ್ಲ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ’ ಎಂದರು. ಗಡಿ ಭಾಗದ ಮಡಿಕೇರಿ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದೂ ತಿಳಿಸಿದರು.
ನೋಡಲ್ ಅಧಿಕಾರಿ ನೇಮಕ: ಹಕ್ಕಿಜ್ವರ ಪ್ರಕರಣಗಳನ್ನು ನಿರ್ವಹಿಸಲು ಪಶು ಆರೋಗ್ಯ ಮತ್ತು ಜಾನುವಾರು ಜೈವಿಕ ಸಂಸ್ಥೆಯ ವಿಜ್ಞಾನಿ ಎಸ್. ಎಂ. ಬೈರೇಗೌಡ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಹೇಳಿದರು.
ಬೈರೇಗೌಡ ಮಾತನಾಡಿ, ‘ಜನರು ಆತಂಕ ಪಡಬೇಕಿಲ್ಲ. ವೈರಸ್ನಿಂದ ಬರುವ ಈ ರೋಗ ರಾಜ್ಯದಲ್ಲಿ ಎಲ್ಲೂ ಪತ್ತೆಯಾಗಿಲ್ಲ’ ಎಂದರು.
‘ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ 7 ಸಾವಿರ ಬಾತುಕೋಳಿಗಳು ಸಾವನ್ನಪ್ಪಿವೆ. ಹಕ್ಕಿ ಜ್ವರದ ಕಾರಣದಿಂದ ಅಲ್ಲಿನ ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಸುಮಾರು 2.4 ಲಕ್ಷ ಬಾತುಕೋಳಿಗಳನ್ನು ಕೊಲ್ಲಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ನಮ್ಮಲ್ಲಿಂದಲೂ ಇಬ್ಬರು ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
‘ರೋಗವು ಅಷ್ಟು ದೂರದಿಂದ ಇಲ್ಲಿಗೆ ಹರಡುವ ಸಾಧ್ಯತೆ ಕಡಿಮೆ. ಆದರೂ, ರಾಜ್ಯದಿಂದ ಕೇರಳಕ್ಕೆ ಹೋಗುವ ಮತ್ತು ಅಲ್ಲಿಂದ ಇಲ್ಲಿಗೆ ಬರುವ ವಾಹನಗಳ ಮೇಲೆ ನಿಗಾ ಇಡಲಾಗಿದೆ’ ಎಂದರು.
ಮನುಷ್ಯರಿಗೂ ಬರುವ ಸಾಧ್ಯತೆ: ಈ ರೋಗದ ವೈರಸ್ ಯಾವ ಕ್ಷಣದಲ್ಲಿ ಬೇಕಾದರೂ ಮಾರ್ಪಾಡುಗೊಳ್ಳಬಹುದು. ಹಾಗಾಗಿ ಮನುಷ್ಯರ ದೇಹಕ್ಕೂ ವೈರಾಣು ಸೇರಬಹುದು ಹಾಗಾಗಿ ಹೆಚ್ಚಿನ ಎಚ್ಚರಿಕೆ ವಹಿಸಲಾಗುತ್ತಿದೆ ಎಂದರು.
ಆದರೂ, ಈ ಸೋಂಕು ಮನುಷ್ಯರಿಗೆ ತಗುಲಿದ ಪ್ರಕರಣಗಳು ತುಂಬಾ ಕಡಿಮೆ. ಹಕ್ಕಿ ಜ್ವರದಿಂದಾಗಿ ದೇಶದಲ್ಲಿ ಇದುವರೆಗೆ ಯಾರೂ ಮೃತಪಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಪಶು ಆರೋಗ್ಯ ಸಂಸ್ಥೆಯ ತಜ್ಞರೂ ಕೇರಳಕ್ಕೆ ಬುಧವಾರ ಭೇಟಿ ನೀಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.