ನವದೆಹಲಿ (ಪಿಟಿಐ): ಅಣ್ಣಾ ಹಜಾರೆ ಅವರ ಭಾವಚಿತ್ರಕ್ಕೆ ಹೂವಿನಹಾರ ಹಾಕಿ ಅಣಕಿಸುವ ಜಾಹೀರಾತನ್ನು ಪತ್ರಿಕೆಗಳಲ್ಲಿ ಪ್ರಕಟಿಸಿರುವ ಬಿಜೆಪಿಯನ್ನು ಶುಕ್ರವಾರ ಇಲ್ಲಿ ತರಾಟೆಗೆ ತೆಗೆದುಕೊಂಡ ಆಮ್ ಆದ್ಮಿ ಪಕ್ಷ (ಎಎಪಿ), ಕೇಸರಿ ಪಕ್ಷವು ‘ಹುತಾತ್ಮರ ದಿನ’ 2ನೇ ಗಾಂಧಿಯನ್ನೂ ಕೊಂದಿದ್ದು, ತಕ್ಷಣ ಈ ಬಗ್ಗೆ ಬಹಿರಂಗ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದೆ.
ಈ ಜಾಹೀರಾತು ಚುನಾವಣಾ ಆಯೋಗದ ಮಾರ್ಗಸೂಚಿಗೆ ವಿರುದ್ಧವಾಗಿದೆ. ಆದ್ದರಿಂದ ಆಯೋಗ ತಕ್ಷಣ ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ಎಎಪಿ ಒತ್ತಾಯಿಸಿದೆ. ಅಲ್ಲದೆ, ‘ಗಾಂಧೀಜಿ ಬಗ್ಗೆ ಬಿಜೆಪಿ ಮಾತನಾಡುವಾಗ ನಾಥೂರಾಂ ಗೋಡ್ಸೆ ಸಿದ್ಧಾಂತ ಅನುಸರಿಸುತ್ತಿದೆ’ ಎಂದೂ ಟೀಕಿಸಿದೆ.
ಗಾಂಧೀಜಿ ಹತ್ಯೆಯಾದ ಜ.30ರಂದು ಬಿಜೆಪಿ ಎರಡನೇ ಗಾಂಧಿಯನ್ನೂ ಕೊಂದಿ-ರುವುದು ಸಂಕುಚಿತ ಮನೋಭಾವ ಪ್ರತಿಬಿಂಬಿಸಿದೆ. ಈ ಜಾಹೀ-ರಾತು ಕೀಳು ಅಭಿರುಚಿಯ-ದ್ದು ಎಂದು ಎಎಪಿಯ ಸಂಜಯ್ಸಿಂಗ್ ಟೀಕಿಸಿದ್ದಾರೆ.
ಇದಕ್ಕೂ ಮುನ್ನ ಟ್ವಿಟರ್ನಲ್ಲಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 1948ರಲ್ಲಿ ಗಾಂಧೀಜಿಯನ್ನು ಗೋಡ್ಸೆ ಕೊಂದರೆ, ಬಿಜೆಪಿ ತನ್ನ ಜಾಹೀರಾತಿನಲ್ಲಿ ಭ್ರಷ್ಟಾಚಾರ ವಿರೋಧಿ ಚಳವಳಿಗಾರ-ನನ್ನು ಕೊಂದಿದೆ. ಈ ಬಗ್ಗೆ ಕ್ಷಮೆ-ಯಾಚಿಸು-ವಂತೆ ಒತ್ತಾಯಿಸಿದ್ದಾರೆ.