ನವದೆಹಲಿ (ಪಿಟಿಐ): ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳ ಸೌಲಭ್ಯ ಸುಧಾರಿಸಲಾಗುವುದು. ವಾರ್ಷಿಕ ಯಾತ್ರೆಗೆ ಭಾರತದ ಕೋಟಾವನ್ನು ಶೇ 20ರಷ್ಟು ಕಡಿತ ಮಾಡಿರುವ ಸೌದಿ ಅರೇಬಿಯಾದ ತೀರ್ಮಾನದ ಬಗ್ಗೆ ಅಲ್ಲಿನ ಸರ್ಕಾರದ ಜತೆ ಚರ್ಚಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಅಖಿಲ ಭಾರತ ವಾರ್ಷಿಕ ಹಜ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ಶ್ರೀನಗರ ವಿಮಾನ ನಿಲ್ದಾಣ ದಿಂದ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಏರ್ ಇಂಡಿಯ ವಿಮಾನಯಾನ ಸಂಸ್ಥೆ ₨1.54 ಲಕ್ಷ ಟಿಕೆಟ್ ದರ ವಿಧಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ದೇಶದ ಇತರ ವಿಮಾನ ನಿಲ್ದಾಣಗಳಿಂದ ಯಾತ್ರೆ ಕೈಗೊಳ್ಳುವವರಿಗೆ ₨62,800 ದರ ವಿಧಿಸಲಾಗುತ್ತಿದೆ.
ಹಜ್ ಯಾತ್ರಿಗಳಿಗೆ ವಸತಿ ಸೌಲಭ್ಯದ್ದೇ ದೊಡ್ಡ ಸಮಸ್ಯೆ. ಇದಕ್ಕೆ ದೀರ್ಘಾವಧಿ ಪರಿಹಾರ ಕಂಡುಕೊಳ್ಳಬೇಕಿದೆ. ಮೆಕ್ಕಾ ಮತ್ತು ನೆರೆಯ ಸ್ಥಳಗಳಲ್ಲಿ ಭಾರತದ ಯಾತ್ರಿಗಳಿಗೆ ಸರ್ಕಾರದಿಂದ ವಸತಿ ಸೌಲಭ್ಯ ಒದಗಿಸುವ ಬಗ್ಗೆ ಆಲೋಚನೆ ನಡೆಸಲಾಗುವುದು ಎಂದರು.
ಸೌದಿ ಸರ್ಕಾರದ ನೆರವಿನೊಂದಿಗೆ ಮೆಕ್ಕಾ ಸುತ್ತಮುತ್ತ ಕೆಲವು ಸಂಕೀರ್ಣಗಳನ್ನು ಅಭಿವೃದ್ಧಿಪಡಿಸಿ ಅವುಗಳನ್ನು ಹಜ್ ಯಾತ್ರಿಗಳು ಮೂರು ತಿಂಗಳು ಬಳಸಬಹುದು. ಉಳಿದ ಒಂಬತ್ತು ತಿಂಗಳ ಅವಧಿಯಲ್ಲಿ ಉಮ್ರಾ ಮತ್ತು ಜಿಯಾರತ್ಗೆ ತೆರಳುವವರು ಬಳಸುವ ವ್ಯವಸ್ಥೆ ಮಾಡಬೇಕಿದೆ ಎಂದರು.
ಸ್ವಾತಂತ್ರ್ಯಕ್ಕೂ ಮೊದಲು ಭಾರತದ ಬಹಳಷ್ಟು ಸ್ವತ್ತುಗಳು ಮೆಕ್ಕಾ, ಮದೀನಾಗಳಲ್ಲಿ ಇದ್ದವು. ಆದರೆ ಅವುಗಳು ಈಗಿಲ್ಲ.
ಈ ಬಗ್ಗೆ ನಾವು ವಿಚಾರಣೆ ನಡೆಸಬೇಕಿದೆ ಎಂದು ತಿಳಿಸಿದರು.