ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಮಾಲೀಕರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ರೌಡಿ ಬ್ರಿಗೇಡ್ ಅಜಂ (40) ಎಂಬಾತನನ್ನು ಸಂಪಿಗೆಹಳ್ಳಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಅಜಂ, 15 ಮಂದಿ ಸಹಚರರೊಂದಿಗೆ ಮಲ್ಲೇಶ್ವರದ ಸುತ್ತಮುತ್ತ ನಿರ್ಮಾಣ ಹಂತದ ಕಟ್ಟಡದ ಮಾಲೀಕರಿಂದ ಹಣ ಸುಲಿಗೆ ಮಾಡುತ್ತಿದ್ದ. ಈ ಬಗ್ಗೆ ಕಟ್ಟಡದ ಮಾಲೀಕರೊಬ್ಬರು ನ.21ರಂದು ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿದ್ದರು. ಆತನ ವಿರುದ್ಧ ದರೋಡೆ (ಐಪಿಸಿ 384) ಮತ್ತು ಕೊಲೆ ಬೆದರಿಕೆ (ಐಪಿಸಿ 506) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
‘ಆ ದೂರು ಆಧರಿಸಿ ಮಫ್ತಿಯಲ್ಲಿ ಹೋಗಿ ಅಜಂನನ್ನು ಬಂಧಿಸಲಾಯಿತು. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆ ಕಾರ್ಯ ನಡೆಯುತ್ತಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಪುಲಿಕೇಶಿನಗರ ಠಾಣೆಯ ರೌಡಿಪಟ್ಟಿಯಲ್ಲಿ ಅಜಂನ ಹೆಸರಿದೆ. ಅಲ್ಲದೇ, ಆತನ ವಿರುದ್ಧ ಪುಲಿಕೇಶಿನಗರ, ಭಾರತಿನಗರ, ಕಾಡುಗೊಂಡನಹಳ್ಳಿ, ಕಬ್ಬನ್ಪಾರ್ಕ್, ಶಿವಾಜಿನಗರ, ವಿಲ್ಸನ್ಗಾರ್ಡನ್ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ಕೊಲೆ, ಅಪಹರಣ, ದರೋಡೆ, ಕೊಲೆ ಯತ್ನ, ಹಲ್ಲೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ 16ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.