ಇಂದು ಎಲ್ಲೆಲ್ಲೂ ಗ್ರಾಮ ಪಂಚಾಯಿತಿ ಚುನಾವಣೆಯ ಜ್ವರ. ಹಿಂದಿಗೂ ಇಂದಿಗೂ ಗ್ರಾಮ ಪಂಚಾಯಿತಿ ಸದಸ್ಯರ ಆಯ್ಕೆಯಲ್ಲಿ ವ್ಯತ್ಯಾಸವಿದೆ.
ಹಿಂದೆ ಗ್ರಾಮದ ಅಭಿವೃದ್ಧಿಯ ಕನಸು ಕಾಣುತ್ತಿದ್ದ ಮುಖಂಡರನ್ನು ಚುನಾವಣೆ ಇಲ್ಲದೆಯೇ ಒತ್ತಾಯಪೂರ್ವ ಕವಾಗಿ ಗ್ರಾಮ ಪಂಚಾಯಿತಿ ಸದಸ್ಯರನ್ನಾಗಿ ಮಾಡುತ್ತಿದ್ದರು. ಇಂದು ಗ್ರಾಮ ಪಂಚಾಯಿತಿ ಸದಸ್ಯರಾದರೆ ಹಣ ಮಾಡಬಹುದೆಂಬ ದುರಾಸೆಯಿಂದ ಚುನಾವಣೆಗೆ ನಿಲ್ಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ಹೆಜ್ಜೆ ಮುಂದೆ ಹೋಗಿರುವ ಕೆಲವು ಗ್ರಾಮಗಳಲ್ಲಿ, ಅವಿರೋಧ ಆಯ್ಕೆ ಗಾಗಿ ಪಂಚಾಯಿತಿ ಸದಸ್ಯತ್ವವನ್ನೇ ಹರಾಜು ಹಾಕಲಾ ಗುತ್ತಿದೆ. ಈ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಿದೆ. ಗ್ರಾಮ ಪಂಚಾಯಿತಿ ಸ್ಥಿತಿಯೇ ಹೀಗಾದರೆ, ಮುಂದಿನ ದಿನಗಳಲ್ಲಿ ಶಾಸಕ ಹಾಗೂ ಸಂಸತ್ ಸದಸ್ಯತ್ವಕ್ಕೂ ಹರಾಜು ಸಂಸ್ಕೃತಿ ಬಂದರೆ ಆಶ್ಚರ್ಯವಿಲ್ಲ. ಈ ವಿಷಯ ಮಾಧ್ಯಮಗಳಲ್ಲಿ ಪ್ರಚಾರವಾಗಿದ್ದರೂ ಚುನಾವಣಾ ಆಯೋಗ ಚಕಾರ ಎತ್ತದೆ ಇರುವುದು ಅಚ್ಚರಿಯ ಸಂಗತಿ.
- ಪ್ರೊ. ಸಿ.ಸಿದ್ಧರಾಜು ಆಲಕೆರೆ,
ಮಂಡ್ಯ