ಛಪರಾ/ಪಟ್ನಾ (ಪಿಟಿಐ): ದೆಹಲಿಯಿಂದ ಅಸ್ಸಾಂನ ದಿಬ್ರುಗಡಕ್ಕೆ ಹೋಗುತ್ತಿದ್ದ ರಾಜಧಾನಿ ಎಕ್ಸ್ಪ್ರೆಸ್ ರೈಲಿನ 12 ಬೋಗಿಗಳು ಹಳಿ ತಪ್ಪಿದ ಪರಿಣಾಮ ಕನಿಷ್ಠ ನಾಲ್ವರು ಮೃತಪಟ್ಟು, 23 ಜನರು ಗಾಯಗೊಂಡಿರುವ ಘಟನೆ ಬಿಹಾರದ ಸರನ್ ಜಿಲ್ಲೆಯಛಪರಾ ಬಳಿ ಬುಧವಾರ ನಡೆದಿದೆ.
ಇದರ ಹಿಂದೆ ನಕ್ಸಲೀಯರ ಕೈವಾಡ ಏನಾದರೂ ಇದೆಯೇ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ. ಇನ್ನೊಂದೆಡೆ, ಬಿಹಾರದ ಪೂರ್ವ ಚಂಪಾರಣ್ಯ ಜಿಲ್ಲೆಯಲ್ಲಿ ಸ್ಫೋಟದಿಂದಾಗಿ ಸರಕು ಸಾಗಣೆ ರೈಲಿನ ಎಲ್ಲ 18 ಬೋಗಿಗಳು ಹಳಿ ತಪ್ಪಿದ ಘಟನೆ ಕೂಡ ನಡೆದಿದೆ. ಈ ಪ್ರಕರಣದ ಹಿಂದೆಯೂ ನಕ್ಸಲೀಯರ ಕೃತ್ಯ ಇರಬಹುದು ಎಂದು ಎಸ್ಪಿ ವಿನಯ್ ಕುಮಾರ್ ಹೇಳಿದ್ದಾರೆ.
‘ಬುಧವಾರ ನಸುಕಿನ 2.11ರ ಹೊತ್ತಿಗೆ ಗೋಲ್ಡನ್ ಗಂಜ್ ನಿಲ್ದಾಣದಲ್ಲಿ ದೆಹಲಿ– ದಿಬ್ರುಗಡ ರಾಜಧಾನಿ ಎಕ್ಸ್ಪ್ರೆಸ್ ರೈಲಿನ 12 ಬೋಗಿಗಳು ಹಳಿತಪ್ಪಿದವು’ ಎಂದು ಪೂರ್ವ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅರವಿಂದ್ ಕುಮಾರ್ ರಜಾಕ್’ ತಿಳಿಸಿದ್ದಾರೆ.
‘ಕೆಲವು ಬೋಗಿಗಳು ಹಳಿಯಿಂದ ಸುಮಾರು 700 ಅಡಿ ದೂರಕ್ಕೆ ಚದುರಿ ಬಿದ್ದಿವೆ’ ಎಂದೂ ಅವರು ಹೇಳಿದ್ದಾರೆ.
ಸ್ಥಳ ಪರಿಶೀಲನೆ ನಡೆಸಿದ ರೈಲ್ವೆ ಸಚಿವ ಸದಾನಂದಗೌಡ, ಇದು ವಿಧ್ವಂಸಕ ಕೃತ್ಯವೇ ಎನ್ನುವುದು ತನಿಖೆಯಿಂದ ಗೊತ್ತಾಗಲಿದೆ ಎಂದಿದ್ದಾರೆ.
ಪರಿಹಾರ: ಮೃತರ ಕಟುಂಬಗಳಿಗೆ ತಲಾ ₨4 ಲಕ್ಷ ಪರಿಹಾರ ಘೋಷಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರಿಗೆ ತಲಾ ₨1.5 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₨20,000 ಪರಿಹಾರ ಘೋಷಿಸಲಾಗಿದೆ.
‘ಘಟನೆಯಲ್ಲಿ ನಕ್ಸಲೀಯರ ಕೈವಾಡ ಇದೆ ಎನ್ನುವುದರ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಅಪಘಾತದ ಹಿಂದೆ ನಕ್ಸಲೀಯರ ಕೈವಾಡದ ಸಾಧ್ಯತೆ ಇದೆ ಎಂದು ಬಿಹಾರ ಮುಖ್ಯಮಂತ್ರಿ ಜೀತನ ರಾಂ ಮಾಂಝಿ ಹೇಳಿದ್ದಾರೆ.
ಗುಪ್ತಚರ ವರದಿ ಇತ್ತು: ‘ಬಿಹಾರದ ತಿರ್ಹತ್ ಹಾಗೂ ಸರನ್ ಪ್ರಾಂತ್ಯಗಳಲ್ಲಿ ರೈಲ್ವೆ ಆಸ್ತಿಪಾಸ್ತಿಗಳ ಮೇಲೆ ನಕ್ಸಲೀಯರು ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ರೈಲ್ವೆ ಸಚಿವಾಲಯಕ್ಕೆ ಗುಪ್ತಚರ ಮಾಹಿತಿ ಬಂದಿತ್ತು’ ಎಂದು ರೈಲ್ವೆ ರಕ್ಷಣಾ ಪಡೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.