ನವದೆಹಲಿ (ಪಿಟಿಐ): ನ್ಯಾಯಾಂಗದ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಯಾವುದೇ ಪ್ರಯತ್ನ ಫಲ ನೀಡದು. ಈ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯಾವುದೇ ಹಸ್ತಕ್ಷೇಪದ ಯತ್ನವನ್ನು ಹಿಮ್ಮೆಟ್ಟಿಸುವ ಅಂತರ್ಗತ ಶಕ್ತಿ ನ್ಯಾಯಾಂಗಕ್ಕೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧಾ ಒತ್ತಿ ಹೇಳಿದರು.
ನ್ಯಾಯಮೂರ್ತಿಗಳ ಸಮಿತಿಯೇ ನ್ಯಾಯಮೂರ್ತಿಗಳ ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಗೆ ತೆರೆ ಎಳೆಯುವ ಉದ್ದೇಶದಿಂದ ಸಂಸತ್ತು ಹೊಸ ಮಸೂದೆಗೆ ಅನುಮೋದನೆ ನೀಡಿರುವುದರಿಂದ ಅವರು ಹೀಗೆ ಹೇಳಿದ್ದಾರೆ ಎನ್ನುವುದು ಸ್ಪಷ್ಟ.
ಕಾರ್ಯಾಂಗವಾಗಲೀ ಅಥವಾ ಬೇರೆ ಯಾರೇ ತಪ್ಪೆಸಗಿದಾಗ ನ್ಯಾಯಾಂಗ ತಮ್ಮ ನೆರವಿಗೆ ಬರುತ್ತದೆ ಎಂದು ಜನ ನಂಬಿದ್ದಾರೆ. ಜನತೆ ನ್ಯಾಯಾಂಗದ ಮೇಲೆ ಇರಿಸಿರುವ ಈ ವಿಶ್ವಾಸವನ್ನು ಕಾಯ್ದುಕೊಳ್ಳಬೇಕಾದರೆ ನ್ಯಾಯಾಂಗಕ್ಕೆ ಸ್ವಾತಂತ್ರ್ಯ ಅತ್ಯಂತ ಅಗತ್ಯ ಎಂದು ವಿಚಾರ ಸಂಕಿರಣದಲ್ಲಿ ಶನಿವಾರ ಅವರು ಪ್ರತಿಪಾದಿಸಿದರು.