ಬೆಂಗಳೂರು: ಕಾಡುಗೊಂಡನಹಳ್ಳಿ ಸಮೀಪದ ಗೋವಿಂದಪುರ ಮುಖ್ಯರಸ್ತೆಯಲ್ಲಿ ಶುಕ್ರವಾರ ಹಾಡಹಗಲೇ ನಸ್ರಿನಾ ಸುಲ್ತಾನ್ (38) ಎಂಬ ಮಹಿಳೆಯನ್ನು ಕತ್ತು ಸೀಳಿ ಕೊಲೆ ಮಾಡಿರುವ ದುಷ್ಕರ್ಮಿಗಳು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಮನೆಯಲ್ಲೇ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ನಸ್ರಿನಾ, ಪತಿ ಇಮ್ತಿಯಾಜ್ ಪಾಷಾ ಅವರಿಂದ ದೂರವಾಗಿ ಮೂವರು ಮಕ್ಕಳ ಜತೆ ವಾಸವಾಗಿದ್ದರು. ಘಟನೆ ವೇಳೆ ಇಬ್ಬರು ಮಕ್ಕಳು ಶಾಲೆಗೆ ಹೋಗಿದ್ದರು. ಹಿರಿಯ ಮಗ ಸುಬೇದ್ ಪಾಷಾ, ಪ್ರಾರ್ಥನೆಗೆ ತೆರಳುವುದಾಗಿ ಮಧ್ಯಾಹ್ನ 1.30ರ ಸುಮಾರಿಗೆ ಮನೆಯಿಂದ ಹೊರ ನಡೆದಿದ್ದ. ಈ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಾರ್ಥನೆಗೆ ಹೋಗಿದ್ದ ಮಗ, ಮಧ್ಯಾಹ್ನ 3 ಗಂಟೆಗೆ ಮನೆಗೆ ಹಿಂದಿರುಗಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಾಯಿ ಅಡುಗೆ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ಆತ, ಪೊಲೀಸರಿಗೆ ತಿಳಿಸಿದ್ದಾನೆ.
‘ದುಷ್ಕರ್ಮಿಗಳು ಬಲವಂತವಾಗಿ ಮನೆಯೊಳಗೆ ನುಗ್ಗಿಲ್ಲ. ಸುಬೇದ್ ಮನೆಗೆ ಬಂದಾಗ ಸ್ಟೌ ಉರಿಯುತ್ತಲೇ ಇತ್ತು. ಅದರ ಮೇಲೆ ಇಟ್ಟಿದ್ದ ಟೀ ಪಾತ್ರೆ ಸೀದು ಹೋಗಿತ್ತು. ಸ್ಟೌ ಪಕ್ಕದಲ್ಲಿ ಮೂರು ಲೋಟ ಜೋಡಿಸಿ ಟ್ಟಿದ್ದರು. ಇದನ್ನು ಗಮನಿಸಿದರೆ ಮನೆಗೆ ಬಂದಿದ್ದವರಿಗೆ ನಸ್ರೀನಾ ಟೀ ಮಾಡುತ್ತಿದಂತೆ ಕಾಣುತ್ತದೆ. ಪರಿಚಿತ ವ್ಯಕ್ತಿಗಳೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಮೊದಲು ಚಾಕುವಿನಿಂದ ಕುತ್ತಿಗೆ ಸೀಳಿರುವ ದುಷ್ಕರ್ಮಿಗಳು, ನಂತರ ಒಂದು ಬಾರಿ ಬೆನ್ನಿಗೆ ಇರಿದು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಆದರೆ, ಎಷ್ಟು ಪ್ರಮಾಣದ ಆಭರಣ ಕಳವಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತಿ ದುಬೈನಲ್ಲಿ
‘ಮೃತರ ಪತಿ ಇಮ್ತಿಯಾಜ್, ನಾಲ್ಕೈದು ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ. ಘಟನೆ ಸಂಬಂಧ ಕಾಡುಗೊಂಡನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೌಟುಂಬಿಕ ಕಲಹ, ವೈಯಕ್ತಿಕ ದ್ವೇಷ, ಹಣಕಾಸಿನ ವ್ಯವಹಾರ ಹೀಗೆ ಎಲ್ಲ ಆಯಾಮಗಳಿಂದಲೂ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ’ ಎಂದು ಪೂರ್ವ ವಿಭಾಗದ ಡಿಸಿಪಿ ಸತೀಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.