ಬೆಂಗಳೂರು: ರಾಜ್ಯಪಾಲ ವಜು ಭಾಯ್ ವಾಲಾ ಅವರು ಫೆ.2ರಂದು ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಲಿದ್ದಾರೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಬುಧವಾರ ಈ ವಿಷಯ ತಿಳಿಸಿದರು.
‘ಇದುವರೆಗೂ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಭಾಷಣ ಸಿದ್ಧಪಡಿಸಲಾಗುತ್ತಿತ್ತು. ರಾಜ್ಯಪಾಲರು ಹಿಂದಿಯಲ್ಲಿ ನೀಡುವಂತೆ ಕೇಳಿದ್ದಾರೆ. ಹಾಗಾಗಿ ಭಾಷಣ ಹಿಂದಿಗೆ ಭಾಷಾಂತರಿಸಬೇಕಾಗಿದೆ’ ಎಂದರು. ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರೊಬ್ಬರು ಹಿಂದಿಯಲ್ಲಿ ಮಾತನಾಡುತ್ತಿರುವುದು ಇದೇ ಮೊದಲು ಎಂದು ಅವರು ಹೇಳಿದರು.