ಶ್ರೀನಗರ (ಐಎಎನ್ಎಸ್): ದಕ್ಷಿಣ ಕಾಶ್ಮೀರದ ಫುಲ್ವಾಮಾ ಜಿಲ್ಲೆಯಲ್ಲಿ ಮಂಗಳವಾರ ಉಗ್ರರೊಂದಿಗೆ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ಸೇನಾಧಿಕಾರಿ ಎಂ.ಎನ್. ರಾಯ್ ಅವರಿಗೆ ಬುಧವಾರ ಹೃದಯಸ್ಪರ್ಶಿ ಸೇನಾ ನಮನ ಸಲ್ಲಿಸಲಾಯಿತು.
ಲೆಫ್ಟಿನೆಂಟ್ ಜನರಲ್ ಸುಬ್ರತಾ ಸಹಾ ನೇತೃತ್ವದಲ್ಲಿ ಬದಾಮಿ ಬಾಗ್ ಕಂಟೋನ್ಮೆಂಟ್ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಹುತಾತ್ಮ ರಾಯ್ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ಭದ್ರತೆಗೆ ದುಃಸ್ವಪ್ನವಾಗಿರುವ ಎಲ್ಲಾ ಶತ್ರುಗಳ ನಿರ್ಮೂಲನೆಗೆ ಇನ್ನಷ್ಟು ಕಟಿಬದ್ಧರಾಗಿ ಹೋರಾಡಲು ಈ ಇಬ್ಬರ ಪ್ರಾಣತ್ಯಾಗ ನಮಗೆ ಸ್ಫೂರ್ತಿಯಾಗುತ್ತದೆ ಎಂದು ಅವರು ಹೇಳಿದರು.
ದಾಳಿಯಲ್ಲಿ ಪ್ರಾಣತೆತ್ತ ಜಮ್ಮು–ಕಾಶ್ಮೀರ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ಟೆಬಲ್ ಸಂಜೀವನ್ ಸಿಂಗ್ ಅವರಿಗೂ ಇದೇ ಸಂದರ್ಭ ಸೇನಾ ನಮನ ಸಲ್ಲಿಸಲಾಯಿತು.
ಸಂಸ್ಥೆಗೆ ಹುತಾತ್ಮನ ಹೆಸರು: ಈ ಬಾರಿಯ ಗಣರಾಜ್ಯೋತ್ಸವ ದಿನ ಮರಣೋತ್ತರ ‘ಅಶೋಕ ಚಕ್ರ’ ಗೌರವಕ್ಕೆ ಪಾತ್ರರಾಗಿದ್ದ ನಾಯಕ್ ನೀರಜ್ ಕುಮಾರ್ ಅವರ ಹೆಸರನ್ನು ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿರುವ ಸೈನಿಕ ಸಂಸ್ಥೆಗೆ ಇದೇ ಸಂದರ್ಭದಲ್ಲಿ ನಾಮಕರಣ ಮಾಡಲಾಯಿತು.
57ನೇ ರಾಷ್ಟ್ರೀಯ ರೈಫಲ್ಸ್ನಲ್ಲಿ ಸೇವೆ ಸಲ್ಲಿಸಿದ್ದ ನಾಯಕ್ ನೀರಜ್ ಅವರು 2014ರ ಆಗಸ್ಟ್ 24ರಂದು ಗುರ್ಧಾಜಿ ಗ್ರಾಮದಲ್ಲಿ ಉಗ್ರರೊಂದಿಗೆ ನಡೆದ ಸಂಘರ್ಷದಲ್ಲಿ ಸಾವನ್ನಪ್ಪಿದ್ದರು. ಅವರ ಗೌರವಾರ್ಥ ಈ ಸಂಸ್ಥೆಗೆ ‘ನೀರಜ್ ಸೈನಿಕ್ ಇನ್ಸ್ಟಿಟ್ಯೂಟ್ ಕಲಾರೂಸ್’ ಎಂದು ಹೆಸರಿಡಲಾಗಿದೆ.
ಮತ್ತೆ ಗಡಿಯಲ್ಲಿ ದಾಳಿ (ಜಮ್ಮು ವರದಿ): ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ರೇಖೆಯುದ್ದಕ್ಕೂ ಪಾಕಿಸ್ತಾನದ ಸೇನೆ ಮಂಗಳವಾರ ರಾತ್ರಿ ಮತ್ತೆ ಕದನ ವಿರಾಮ ಒಪ್ಪಂದ ಉಲ್ಲಂಘನೆ ಮಾಡಿದ್ದು ಗಡಿ ಭದ್ರತಾ ಪಡೆಯನ್ನು (ಬಿಎಸ್ಎಫ್) ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದೆ. ಇಲ್ಲಿನ ಅರ್ನಿಯಾ ಉಪವಿಭಾಗದಲ್ಲಿ 2–3 ಗಡಿ ಹೊರ ಠಾಣೆಗಳ ಮೇಲೆ ಪಾಕ್ ಸೈನಿಕರು ತಡರಾತ್ರಿ ಸಣ್ಣ ಪ್ರಮಾಣದ ಗುಂಡಿನ ದಾಳಿ ನಡೆಸಿದರು ಎಂದು ಬಿಎಸ್ಎಫ್ ಅಧಿಕಾರಿ ತಿಳಿಸಿದರು.
₨ 30ಲಕ್ಷ ನೆರವು
ಲಖನೌ (ಪಿಟಿಐ): ಜಮ್ಮು– ಕಾಶ್ಮೀರದ ತ್ರಾಲ್ನಲ್ಲಿ ಉಗ್ರರೊಂದಿಗಿನ ಹೋರಾಟದಲ್ಲಿ ಮಂಗಳವಾರ ಮೃತಪಟ್ಟ ಸೇನಾಧಿಕಾರಿ ಎಂ.ಎನ್. ರಾಯ್ ಅವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬುಧವಾರ ಅಂತಿಮ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಹುತಾತ್ಮ ಸೇನಾಧಿಕಾರಿಯ ಕುಟುಂಬಕ್ಕೆ ₨30ಲಕ್ಷ ಹಣಕಾಸು ನೆರವನ್ನೂ ಮುಖ್ಯಮಂತ್ರಿ ಬಿಡುಗಡೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.