ನವದೆಹಲಿ (ಪಿಟಿಐ): ಈಚೆಗೆ ಸಂಭವಿಸಿದ ‘ಹುದ್ಹುದ್’ ಚಂಡಮಾರುತದಿಂದಾಗಿ ಹಾನಿಗೆ ಒಳಗಾಗಿರುವ ವಿಶಾಖಪಟ್ಟಣ ಜಿಲ್ಲೆಯ ಗ್ರಾಮವೊಂದನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ದತ್ತು ಪಡೆದುಕೊಂಡಿದ್ದಾರೆ.
ಮೀನುಗಾರರು ವಾಸಮಾಡುವ ಮತ್ತು ಸುತ್ತಲೂ ಕುಗ್ರಾಮಗಳನ್ನು ಹೊಂದಿರುವ ಚಪ್ಲಾ ಉಪ್ಪಾದ ಗ್ರಾಮವನ್ನು ನಾಯ್ಡು ಆಯ್ಕೆ ಮಾಡಿಕೊಂಡಿದ್ದು, ಸಂಪೂರ್ಣ ಪುನರ್ವಸತಿ ಕಲ್ಪಿಸಲು ತೀರ್ಮಾನಿಸಿದ್ದಾರೆ.
ಪುನರ್ವಸತಿಗಾಗಿ ತಮ್ಮ ಒಂದು ತಿಂಗಳ ವೇತನ ಹಾಗೂ ಸಂಸದರ ನಿಧಿಯಿಂದ ರೂ 25 ಲಕ್ಷವನ್ನು ಅವರು ನೀಡಲಿದ್ದಾರೆ. ಉಳಿದ ಹಣವನ್ನು ಟ್ರಸ್ಟ್ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಮೂಲಕ ಸಂಗ್ರಹಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಲ್ಲೂರು ಮೂಲದ ಸ್ವರ್ಣ ಭಾರತಿ ಟ್ರಸ್ಟ್ ರೂ 10 ಲಕ್ಷ ನೀಡಲು ಮುಂದಾಗಿದೆ. ಚಂಡಮಾರುತದಿಂದ ಹಾನಿಗೆ ಒಳಗಾಗಿರುವ ಪ್ರದೇಶಗಳಲ್ಲಿ ಎರಡು ದಿನ ಪ್ರವಾಸ ಕೈಗೊಂಡಿದ್ದ ನಾಯ್ಡು, ಆಂಧ್ರಪ್ರದೇಶದ ಉತ್ತರ ಕರಾವಳಿ ಭಾಗದಲ್ಲಿ ಪುನರ್ವಸತಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ವಿಶಾಖಪಟ್ಟಣದಲ್ಲಿ ಕೇಂದ್ರ ಸರ್ಕಾರದ 20 ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ನಾಯ್ಡು, ಪುನರ್ವಸತಿ ಸಂಬಂಧ ಚರ್ಚೆ ನಡೆಸಿದರು.