ನವದೆಹಲಿ (ಪಿಟಿಐ): ಯಾವುದೇ ಕಾರಣಕ್ಕೂ ಕಾಶ್ಮೀರದ ಹುರಿಯತ್ ನಾಯಕರ ಜತೆ ಮಾತುಕತೆ ಕೈಬಿಡುವುದಿಲ್ಲ. ಇದೇ ಕಾಲಕ್ಕೆ ಭಾರತದೊಂದಿಗಿನ ದ್ವಿಪಕ್ಷೀಯ ಮಾತುಕತೆಯನ್ನೂ ನಿಲ್ಲಿಸುವುದಿಲ್ಲ ಎಂದು ಪಾಕಿಸ್ತಾನ ಬುಧವಾರ ಸ್ಪಷ್ಟಪಡಿಸಿದೆ.
ಭಾರತದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ಬದ್ಧವಾಗಿದ್ದು, ಈ ಪ್ರಕ್ರಿಯೆ ಅರ್ಧಕ್ಕೆ ಸ್ಥಗಿತಗೊಳ್ಳಲು ಬಿಡುವುದಿಲ್ಲ ಎಂದೂ ಅದು ಹೇಳಿದೆ.
ಇಸ್ಲಾಮಾಬಾದ್ನಲ್ಲಿ ನಡೆಯಬೇಕಿದ್ದ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯಿಂದ ಹಿಂದೆ ಸರಿದ ಭಾರತದ ನಿರ್ಧಾರದಿಂದ ಎದೆಗುಂದಿಲ್ಲ ಎಂದು ದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಅಬ್ದುಲ್ ಬಸಿತ್ ಸ್ಪಷ್ಟಪಡಿಸಿದ್ದಾರೆ.
ಮಾತುಕತೆ ರದ್ದಾಗಿರುವುರಿಂದ ಯಾರೂ ನಿರಾಶರಾಗಬೇಕಿಲ್ಲ ಹಾಗೂ ಈ ಬೆಳವಣಿಗೆಯಿಂದ ದ್ವಿಪಕ್ಷೀಯ ಮಾತುಕತೆಗೆ ಹಿನ್ನಡೆ ಆಗಿಲ್ಲ ಎಂದು ವಿದೇಶಿ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಅವರು ಹೇಳಿದರು.
ಭಾರತದ ಕಠಿಣ ಎಚ್ಚರಿಕೆ ಮತ್ತು ಪ್ರತಿಭಟನೆಯ ನಡುವೆಯೂ ಹುರಿಯತ್ ನಾಯಕರ ಜತೆ ಮಾತುಕತೆ ನಡೆಸಿದ ಬಸಿತ್, ಶಿಷ್ಟಾಚಾರ ಉಲ್ಲಂಘಿಸಿಲ್ಲ ಎಂದರು.
‘ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ನಾವು ಬದ್ಧರಾಗಿದ್ದೇವೆ. ಈ ದಿಸೆಯಲ್ಲಿ ಉಭಯ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ಮುನ್ನಡೆಯಬೇಕೇ ಹೊರತು ಸಂಘರ್ಷಕ್ಕೆ ಇಳಿಯಬಾರದು. ಮಾತುಕತೆಗೆ ಎಲ್ಲ ಸಮಾನ ಪಾಲುದಾರರ ಅಭಿಪ್ರಾಯ ಮತ್ತು ಪಾಲ್ಗೊಳ್ಳುವಿಕೆಯೂ ಮುಖ್ಯ’ ಎಂದರು.
ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಹಿಡಿಯಲು ಹುರಿಯತ್ ನಾಯಕರೊಂದಿಗೆ ಮಾತುಕತೆ ಅಗತ್ಯವಿದೆ. ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಪ್ರಕ್ರಿಯೆಯಲ್ಲಿ ಎಲ್ಲ ಪಾಲುದಾರರು ಪಾಲ್ಗೊಳ್ಳಬೇಕು ಎನ್ನುವುದು ಪಾಕಿಸ್ತಾನದ ಮೂಲ ಆಶಯ ಎಂದರು.
ಇಸ್ಲಾಮಾಬಾದ್ನಲ್ಲಿರುವ ಭಾರತದ ಹೈಕಮಿಷನರ್ ಎಲ್ಲ ರೀತಿಯ ಜನರನ್ನು ಭೇಟಿಯಾಗಿ ಚರ್ಚಿಸುವಾಗ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಹುರಿಯತ್ ನಾಯಕರೊಂದಿಗೆ ಚರ್ಚಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಹಾಗಾದರೆ ಬಲೂಚ್ ಪ್ರಾಂತ್ಯದ ಪ್ರತ್ಯೇಕತವಾದಿ ನಾಯಕರನ್ನು ಭೇಟಿ ಮಾಡಲು ಇಸ್ಲಾಮಾಬಾದ್ನಲ್ಲಿರುವ ಭಾರತದ ಹೈಕಮಿಷನರ್ ಅವರಿಗೆ ಪಾಕಿಸ್ತಾನ ಅವಕಾಶ ನೀಡುತ್ತದೆಯೇ ಎಂಬ ಪ್ರಶ್ನೆಗೆ ಅವರು ಯಾವುದೇ ಉತ್ತರ ನೀಡಲಿಲ್ಲ.
ಭಾರತದೊಂದಿಗೆ ಈ ಹಿಂದೆ ಪಾಕಿಸ್ತಾನ ನಡೆಸಿದ ಅನೇಕ ಮಹತ್ವದ ಮಾತುಕತೆಗಳಿಗೂ ಮುನ್ನ ಕಾಶ್ಮೀರ ಹುರಿಯತ್ ನಾಯಕರ ಜತೆ ಚರ್ಚೆ ನಡೆಸಲಾಗಿತ್ತು. ಇದು ಹೊಸತೇನಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.