ನವದೆಹಲಿ(ಪಿಟಿಐ): ದೇಶದ ತೆರಿಗೆ ಪದ್ಧತಿ ಹೂಡಿಕೆದಾರ ಸ್ನೇಹಿಯಾಗಿರಬೇಕು. ಎಲ್ಲ ಕಾಲಕ್ಕೂ ಊರ್ಜಿತವಾಗದಂತಹ ತೆರಿಗೆ ಪದ್ಧತಿಯಿಂದ ದೇಶ ವಿದೇಶದ ಹೂಡಿಕೆದಾರರು ದೇಶದಿಂದಲೇ ವಿಮುಖರಾಗುತ್ತಾರೆ. ದೇಶಕ್ಕೆ ಕೆಟ್ಟ ಹೆಸರು ಬರುತ್ತದೆ ಅಷ್ಟೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೇಳಿದರು.
ಇಲ್ಲಿ ಶುಕ್ರವಾರ ಎಚ್.ಟಿ ಲೀಡರ್ಷಿಪ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಹೂಡಿಕೆದಾರ ಸ್ನೇಹಿ ತೆರಿಗೆ ಪದ್ಧತಿ ಮತ್ತು ಭೂ ಸ್ವಾಧೀನ ಕಾರ್ಯವಿಧಾನಗಳನ್ನು ಮುಖ್ಯವಾಹಿನಿಗೆ ತರುವುದು ಸದ್ಯ ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲು ಎಂದರು.
ಸರಕು ವರ್ಗಾವಣೆ ಶುಲ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ತೈಲ ಕಂಪೆನಿ ಶೆಲ್ ಇಂಡಿಯಾದಿಂದ ಆದಾಯ ತೆರಿಗೆ ಇಲಾಖೆಗೆ ₨18 ಸಾವಿರ ಕೋಟಿ ನಷ್ಟವಾಗಿದೆ ಎಂಬ ಪ್ರಕರಣ ಮುಂಬೈ ಹೈಕೋರ್ಟಿನಲ್ಲಿರುವ ಕುರಿತು ಪ್ರತಿಕ್ರಿಯಿಸುವಾಗ ಜೇಟ್ಲಿ ಈ ರೀತಿ ಅಭಿಪ್ರಾಯಪಟ್ಟರು.
ಈಗಾಗಲೇ ₨20 ಸಾವಿರ ಕೋಟಿ ತೆರಿಗೆಗೆ ಸಂಬಂಧಿಸಿದಂತೆ ವೊಡಾಫೋನ್ ಮತ್ತು ತೆರಿಗೆ ಇಲಾಖೆ ಮಧ್ಯೆ ವ್ಯಾಜ್ಯವಿದೆ. ಹೀಗಾಗಿ ಹೂಡಿಕೆದಾರ ಸ್ನೇಹಿ ತೆರಿಗೆ ಪದ್ಧತಿ ಇಲ್ಲದಿದ್ದರೆ ಅವರು ಬೇರೆ ದೇಶಗಳತ್ತ ಗಮನ ಹರಿಸುತ್ತಾರೆ ಎಂದ ಸಚಿವರು, ದೇಶದಲ್ಲಿನ ತೆರಿಗೆ ಪದ್ಧತಿಯಲ್ಲಿ ಬಹಳಷ್ಟು ಬದಲಾವಣೆ ತರಬೇಕಿರುವ ಕುರಿತು ಒತ್ತು ನೀಡಿ ಶೃಂಗಸಭೆಯಲ್ಲಿ ಮಾತನಾಡಿದರು.