ಹನೂರು: ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಧಿಕಾರಿಗಳು ಶುಕ್ರವಾರ ಹನೂರು ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಸಭೆ ನಡೆಸಿ ಸ್ಥಳಿಯರ ಸಲಹೆ ಸೂಚನೆ ಪಡೆದರು.
ರಾಜ್ಯ ಹೆದ್ದಾರಿ ಯೋಜನಾಧಿಕಾರಿ ನರಸಿಂಹಯ್ಯ, ತಿ. ನರಸೀಪುರದಿಂದ ಕೊಳ್ಳೇಗಾಲ ಮಾರ್ಗವಾಗಿ ಬೈಪಾಸ್ ರಸ್ತೆ ಹಾಗೂ ಹನೂರು ಅಯ್ಯಪ್ಪಸ್ವಾಮಿ ದೇಗುಲದಿಂದ ಪೆಟ್ರೊಲ್ ಪಂಪ್ವರೆಗೂ ರಸ್ತೆ ವಿಸ್ತರಣೆ ಮಾಡಿ, ಸಂಚಾರಕ್ಕೆ ತೊಂದರೆ ಆಗದಂತೆ ಮುಕ್ತ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಈ ರಸ್ತೆಯಲ್ಲಿ ಬರುವ ವಾಣಿಜ್ಯ ಮಳಿಗೆಗಳು, ಮನೆಗಳ ಮಾಲೀಕರು ತಮ್ಮ ಸಲಹೆ, ಸೂಚನೆ ನೀಡಬಹುದು. ದೇಗುಲ, ಶಿಕ್ಷಣ ಸಂಸ್ಥೆ, ಸಾರ್ವಜನಿಕ ಆಸ್ಪತ್ರೆಗಳು ಇದ್ದರೆ ಬೇರೆಡೆಗೆ ಸ್ಥಳಾಂತರಿಸಬಹುದು ಎಂದು ಸಲಹೆ ನೀಡಿದರು.
ನಾರಾಯಣ ಆಚಾರ್ ಅವರು, ಸಾರ್ವಜನಿಕರು ವ್ಯಕ್ತಪಡಿಸುವ ಅಭಿಪ್ರಾಯ, ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಮುಕ್ತ ಸಂಚಾರಕ್ಕೆ ಒತ್ತು ನೀಡಿ ಶಾಲೆ, ಅಪಘಾತ ವಲಯಗಳನ್ನು ಗುರುತಿಸಿ ಅಂಡರ್ ಪಾಸ್ ನಿರ್ಮಿಸಲು ಒತ್ತು ನೀಡಲಾಗುವುದು ಎಂದರು.
ಹೆದ್ದಾರಿ ಅಧಿಕಾರಿ ದಿವ್ಯಕುಮಾರ್ ದಾಸ್, ರಾಹುಲ್ ರಾಜನ್, ವಿ.ಎನ್. ಮೂರ್ತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಾಲರಾಜ ನಾಯ್ದು, ಸದಸ್ಯರಾದ ರಾಜುಗೌಡ, ಬಸವರಾಜು, ನಾಗಣ್ಣ, ವರ್ತಕರ ಸಂಘದ ಅಧ್ಯಕ್ಷ ಜಯಪ್ರಕಾಶ ಗುಪ್ತಾ, ಮುಖಂಡ ರಮೇಶನಾಯ್ದು, ಮಾದೇಶ್, ಆನಂತಗುಪ್ತ ಇದ್ದರು.